ಮೈಸೂರಿನ ಅನ್ ಅಫಿಶಿಯಲ್ ಉಪ ಮುಖ್ಯಮಂತ್ರಿ ಈ ಮರೀಗೌಡ!

ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಬೆದರಿಕೆ ಹಾಕುವ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತಮಿತ್ರ ಕೆ.ಮರೀಗೌಡ ಅವರು ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ...
ಮರೀಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ
ಮರೀಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಬೆದರಿಕೆ ಹಾಕುವ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತಮಿತ್ರ ಕೆ.ಮರೀಗೌಡ ಅವರು ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ. ಅಲ್ಲದೆ, ಮರೀಗೌಡ ವಿರುದ್ಧ ಸಾಕಷ್ಟು ಅಸಮಧಾನದ ಮಾತುಗಳೂ ಕೂಡ ಕೇಳಿಬರುತ್ತಿವೆ.  

ಕನಿಷ್ಟ ಪಕ್ಷ ಗ್ರಾಮ ಪಂಚಾಯತಿ ಸದಸ್ಯನಾಗಿರಲಿಲ್ಲದಿದ್ದರೂ, ಮರೀಗೌಡ ಅವರು ಮೈಸೂರಿನಲ್ಲಿ ಅನ್ ಅಫಿಶಿಯಲ್ ಉಪ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ. ರಸ್ತೆಯಲ್ಲಿ ಮರೀಗೌಡ ಅವರ ವಾಹನ ಹೋದರೆ ಆಲೋಚನೆ ಮಾಡದೆಯೇ ಇಲ್ಲಿನ ಪೊಲೀಸ್ ಅಧಿಕಾರಿಗಳು ಅವರಿಗೆ ಸೆಲ್ಯೂಟ್ ಮಾಡುತ್ತಾರೆ. ಮೈಸೂರಿನಲ್ಲಿ ಮರೀಗೌಡ ಅವರ ಶಕ್ತಿ ಎಷ್ಟಿದೆ ಎಂಬುದನ್ನು ಇದು ಸೂಚಿಸುತ್ತದೆ.

ಮೈಸೂರಿನಲ್ಲಿ ಮರೀಗೌಡ ಅವರು ಉಪ ಮುಖ್ಯಮಂತ್ರಿ ಇದ್ದಂತೆ ಎಂದು ಸ್ವಪಕ್ಷೀಯ ನಾಯಕರೇ ಮಾತನಾಡಿಕೊಳ್ಳುತ್ತಿರುವುದು ಕೇಳಿಬರುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಇಂದು ಯಾವುದೇ ಫೈಲ್ ಗಳು ಮುಂದೆ ಸಾಗಬೇಕಾದರೂ ಅದಕ್ಕೆ ಮರೀಗೌಡ ಅವರ ಅನುಮತಿ ಬೇಕೆಂತೆ. ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕಾದರೂ, ಗೌರವ ಸಲ್ಲಿಸಬೇಕಾದರೂ ಇವರ ಅನುಮತಿ ಬೇಕೆಂಬುದು ಕೆಲವರ ಅಭಿಪ್ರಾಯವಾಗಿದೆ.

ಮೈಸೂರು ತಾಲೂಕಿನ ಹಿಂದುಳಿದ ಗ್ರಾಮ ಬೀರಿಹುಂಡಿಯ ಮೂಲಕ ರಾಜಕೀಯ ರಂಗಕ್ಕೆ ಇಳಿದಿದ್ದ ಅವರು, ಗ್ರಾಮ ಪಂಚಾಯತಿ ಸದಸ್ಯ ಸ್ಥಾನದ ಮೂಲಕ ತಮ್ಮ ರಾಜಕೀಯ ವೃತ್ತಿಯನ್ನು ಆರಂಭಿಸಿದ್ದರು. ನಂತರ ಮೈಸೂರು ತಾಲೂಕು ಪಂಚಾಯತಿ ಅಧ್ಯಕ್ಷನಾಗಿದ್ದರು. ಇದಾದ ಕೆಲ ಕಾಲಗಳ ಬಳಿಕ ಮೈಸೂರು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾದರು.

ನಂತರ ರಾಜಕೀಯ ರಂಗದಲ್ಲಿ ಯಶಸ್ಸುಗಳಿಸುತ್ತಲೇ ಬಂದ ಮರೀಗೌಡ ಅವರು ಸಮೂಹ ಜನನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಪ್ತ ಸ್ನೇಹಿತರಾದರು. ಈಗಲೂ ಮರೀಗೌಡ ಎಂದರೆ ಸಿದ್ದರಾಮಯ್ಯ ಅವರ ಆಪ್ತಮಿತ್ರ ಎಂದೇ ಹೇಳುವುದುಂಟು.

ಮೈಸೂರಿನಲ್ಲಿ ಮರೀಗೌಡ ಇಲ್ಲದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡುವುದು ಅತೀ ವಿರಳ. ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕಾರ ಮಾಡುವುದರಿಂದ ಹಿಡಿದು ಈಗಲೂ ಸಿದ್ದರಾಮಯ್ಯ ಅವರು ದೆಹಲಿ, ರಾಜಭವನ ಹಾಗೂ ಎಲ್ಲಿಯೇ ಹೋದರೂ ಅವರೊಂದಿಗೆ ಮರೀಗೌಡ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ. ಇದು ಅವರಿಬ್ಬರಲ್ಲಿನ ಆತ್ಮೀಯತೆಯನ್ನು ತೋರಿಸುತ್ತದೆ.

ಸಿದ್ದರಾಮಯ್ಯ ಅವರೊಂದಿಗೆ ಮರೀಗೌಡ ಅವರ ಒಡನಾಟವನ್ನು ನೋಡುವ ಮೈಸೂರು ಜನತೆಯ ಕೂಡ ಮರೀಗೌಡ ಅವರಿಗೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಇದನ್ನೇ ಮರೀಗೌಡ ಅವರು ಬಳಕೆ ಮಾಡಿಕೊಂಡು ಅಧಿಕಾರಿಯಂತೆ ವರ್ತಿಸುತ್ತಿದ್ದಾರೆಂದು ಕಾಂಗ್ರೆಸ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದಲ್ಲದೆ, ಮರೀಗೌಡ ಅವರು ಸರ್ಕಾರ ಅಭಿವೃದ್ಖಿ ಕಾರ್ಯಗಳಲ್ಲೂ ಭಾಗಿಯಾಗುತ್ತಿರುವುದೂ ಕೂಡ ಕಂಡು ಬರುತ್ತಿದ್ದು, ಚಾಮುಂಡೇಶ್ವ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಭೂಮಿ ಪೂಜೆಯಲ್ಲಿಯೂ ಕಾಣಿಸಿಕೊಂಡಿದ್ದರು. ಈ ನಡವಳಿಕೆ ಶಿಷ್ಟಾಚಾರದ ಉಲ್ಲಂಘನೆ ಮಾಡಿದಂತೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ. ಮರೀಗೌಡ ಅವರಿಗೆ ಸೂಚನೆ ನೀಡಲು ಸರ್ಕಾರಿ ಕಚೇರಿಗಳು ಕೂಡ ಹೆದರುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿನೆ. ಮರೀಗೌಡ ಅವರು ಈಗಲೇ ಐಷಾರಾಮಿ ಕಾರುಗಳಲ್ಲಿ ಓಡಾಡಿಕೊಂಡಿರುವುದು, ಐಷಾರಾಮಿ ಪ್ರವಾಸಕ್ಕೆ ಹೋಗಿ ಬರುವುದನ್ನು ಕಾಣಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com