ರಾಮಗನರ: ಯುವಕರ ಮೋಜಿನ ಡ್ರೈವ್ ತಂದ ಆಪತ್ತು, ಕುರಿಕಳ್ಳರೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿತ
ಬೆಂಗಳೂರು: ಮೋಜಿನ ಡ್ರೈವಿಂಗ್ ಗಾಗಿ ತೆರಳಿದ್ದ ಯುವಕರನ್ನು ಕುರಿಕಳ್ಳರೆಂದು ಶಂಕಿಸಿದ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ರಾಮನಗರ ಜಿಲ್ಲೆ ಕಟುಕನಪಾಳ್ಯ ಎಂಬ ಹಳ್ಳಿಯಲ್ಲಿ ನಡೆದಿದೆ.
ಸಫಾರಿ ಕಾರಿನಲ್ಲಿ ತೆರಳಿದ್ದ ಎಂಜಿನೀಯರಿಂಗ್ ವಿದ್ಯಾರ್ಥಿಗಳಾದ, ಪೃಥ್ವಿರಾಜ್, ಶ್ರೀಕಾಂತ್, ಕಾನೂನು ವಿದ್ಯಾರ್ಥಿ ವೇದರಾಜ್, ವೈದ್ಯ ವಿದ್ಯಾರ್ಥಿ ರಘು ಮತ್ತು ಅಮೃತ್ ಭಾನುವಾರ ತುಮಕೂರಿನ ಸಮೀಪವಿರುವ ಸಾವನದುರ್ಗಕ್ಕೆ ಹೋಗಿ ಅಲ್ಲಿಂದ ರಾಮನಗರಕ್ಕೆ ಪ್ರಯಾಣ ಬೆಳೆಸಿದ್ದರು. ನಂತರ ಅಲ್ಲಿಂದ ದೊಡ್ಡ ಆಲದ ಮರ ಮಾರ್ಗದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದರು.
ಮುಂಜಾನೆ 3.30ರ ವೇಳೆಯಲ್ಲಿ ಸರಿಯಾದ ಮಾರ್ಗ ಕಾಣದೇ ತಪ್ಪು ಮಾರ್ಗದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಕಟುಕನಪಾಳ್ಯ ಎಂಬ ಗ್ರಾಮದಲ್ಲಿ ತಮ್ಮ ಕಾರು ನಿಲ್ಲಿಸಿ, ಬೆಳಗ್ಗೆವರೆಗೂ ಕಾರಿನಲ್ಲೇ ಕಾಲ ಕಳೆಯಲು ನಿರ್ಧರಿಸಿದರು.
ಬೆಳಗ್ಗೆಯಿಂದ ಸುತ್ತಾಡಿ ಆಯಾಸವಾಗಿತ್ತು. ಹೀಗಾಗಿ ಅಲ್ಲೆ ವಿಶ್ರಾಂತಿ ಪಡೆದು ಬೆಳಗ್ಗೆ ಹೊರಡಲು ತೀರ್ಮಾನಿಸಿ, ಮೂತ್ರ ವಿಸರ್ಜನೆ ಮಾಡಲು ಪೃಥ್ವಿ ಮತ್ತು ರಘು ಹೊರಟರು. ಏಕಾಏಕಿ ಬಂದ ಕೆಲ ಜನ ನಮ್ಮನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದರು ಎಂದು ಪೃಥ್ವಿರಾಜ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸುಮಾರು 10 ಮೇಕೆ ಕಳುವಾಗಿದ್ದು, ತಮ್ಮ ಹಸು ಕುರಿಗಳನ್ನು ಕಳ್ಳರಿಂದ ಕಾಯ್ದುಕೊಳ್ಳಲು ಗ್ರಾಮಸ್ಥರು ಕಾವಲು ಕಾಯುತ್ತಿದ್ದರು. ಈ ವೇಳೆ ಇವರೇ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು ಅವರನ್ನು ಕಟ್ಟಿಹಾಕಿ ಥಳಿಸಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳು ಗ್ರಾಮಸ್ಥರ ಮೇಲೆ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ