ಬೆಂಗಳೂರು: ಚಲಿಸುತ್ತಿದ್ದ ಆಟೊ ರಿಕ್ಷಾ ಮೇಲೆ ತೆಂಗಿನ ಮರ ಬಿದ್ದು, ಅದರ ಚಾಲಕ ಇಮ್ತಿಯಾಜ್ ಪಾಷಾ (45) ಎಂಬುವರು ಮೃತಪಟ್ಟ ಘಟನೆ ಬಸವನಗುಡಿಯ ಕೆ.ಆರ್.ರಸ್ತೆಯಲ್ಲಿ ನಡೆದಿದೆ. ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಜೆ.ಪಿ.ನಗರ 5ನೇ ಹಂತದ ಇಮ್ತಿಯಾಜ್, ಮಧ್ಯಾಹ್ನ 1.30 ರ ಸುಮಾರಿಗೆ ಇಬ್ಬರು ಪ್ರಯಾಣಿಕರನ್ನು ಗಾಯಿತ್ರಿ ನರ್ಸಿಂಗ್ ಹೋಂಗೆ ಕರೆದೊಯ್ಯುತ್ತಿದ್ದರು. ಅವರು ಕೆ.ಆರ್.ರಸ್ತೆಗೆ ಬರುತ್ತಿದ್ದಂತೆಯೇ ಜ್ವಾಲಾಮುಖಿ ಪ್ರಿಂಟರ್ಸ್ ಕಾಂಪೌಂಡ್ ನಲ್ಲಿದ್ದ ಮರ ಮುರಿದು ಆಟೊ ಮೇಲೆ ಬಿದ್ದಿತು ಎಂದು ಪೊಲೀಸರು ಹೇಳಿದರು.
ತಲೆ ಮೇಲೆಯೇ ಮರ ಬಿದ್ದಿದ್ದರಿಂದ ಇಮ್ತಿಯಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ತಕ್ಷಣ ಬೇರೆ ಆಟೊ ಹತ್ತಿ ಹೋಗಿದ್ದರಿಂದ ವಿಚಾರಣೆಗೆ ಸಿಗಲಿಲ್ಲ. ಆಟೋ ಹಿಂದೆ ಬರುತ್ತಿದ್ದ ಸ್ವಿಫ್ಟ್ ಕಾರು ಕೂಡ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದರು.
ನಂತರ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ರಸ್ತೆ ಮೇಸೆ ಬಿದ್ದಮರವನ್ನು ತುಂಡುಗಳಾಗಿ ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜ್ವಾಲಾಮುಖಿ ಪ್ರಿಂಟರ್ಸ್ ಮಾಲೀಕರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement