ಬೆಂಗಳೂರು: ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ 56 ವರ್ಷದ ಮುಖ್ಯ ಶಿಕ್ಷಕರೊಬ್ಬರು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೌಡರದೊಡ್ಡಿ ಗ್ರಾಮದ ನಿವಾಸಿ ಮೋಹನ್ ಕುಮಾರ್ ಎಂಬುವರು ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇದು ಆತ್ಮಹತ್ಯೆ ಯತ್ನ ಅಲ್ಲ ಎಂದು ಸಿಎಂ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ಮೋಹನ್ ಕುಮಾರ್ ಅವರನ್ನು ಐಸಿಯನಲ್ಲಿ ಇಡಲಾಗಿತ್ತು. ಗುರುವಾರ ಸಂಜೆ 5 ಗಂಟೆಗೆ ಅ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆ ಸೂಪರಿಂಡೆಂಟ್ ಡಾ.ಕೆ.ಎಸ್ ಮಂಜುನಾಥ್ ಹೇಳಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಮೋಹನ್ ಕುಮಾರ್ ವರ್ಗಾವಣೆ ಬಯಸಿದ್ದರು. ಅದಕ್ಕಾಗಿ 3 ಲಕ್ಷ ರು ಲಂಚ ಕೂಡ ನೀಡಿದ್ದರು ಆದರೆ ಎಷ್ಟೇ ಪ್ರಯತ್ನ ಪಟ್ಟರೂ ವರ್ಗಾವಣೆಯಾಗಿರಲಿಲ್ಲ. ಹೀಗಾಗಿ ಸಿಎಂ ಅವರನ್ನು ಭೇಟಿ ಮಾಡಲು ಬಂದಿದ್ದರು.
ಕುಸಿದ ಬಿದ್ದ ಮುಖ್ಯ ಶಿಕ್ಷಕನನ್ನು ಆಸ್ಪತ್ರೆಗೆ ಸೇರಿಸಿದ ಸಿಎಂ ಕಚೇರಿ ಸಿಬ್ಬಂದಿ ಅವರ ಕುಟುಂಬಸ್ಥರು ಅವರನ್ನು ನೋಡಲು ಆಸ್ಪತ್ರೆ ಒಳಗೆ ಬಿಡಲಿಲ್ಲ. ಕುಟುಂಬಸ್ಥರಿಗೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರ್ ಸ್ವಾಮಿ ಆರೋಪಿಸಿದ್ದಾರೆ.
ಇಷ್ಟೆಲ್ಲಾ ನಡೆದರು ಪ್ರಕರಣವನ್ನು ಯಾರಿಗೂ ಗೊತ್ತಾಗದಂತೆ ಸಿಎಂ ಮುಚ್ಚಿಹಾಕಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂದು ಬಹಿರಂಗ ಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
Advertisement