ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಆಪ್ತ ಕೆ. ಮರಿಗೌಡ ರಕ್ಷಣೆಗೆ ಗೃಹ ಇಲಾಖೆ ಯತ್ನ ನಡೆಸುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಗೃಹ ಸಚಿವರ ಸಲಹೆಗಾರರಾದ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ನಿನ್ನೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಶಿಖಾ ಅವರ ಪತಿ ಅಜಯ್ ಭೂಷಣ್ ಅವರ ಮಂಡ್ಯದಲ್ಲಿರುವ ಅಧಿಕೃತ ನಿವಾಸಕ್ಕೆ ತೆರಳಿದ್ದರು.
ಸುಮಾರು ಮೂರು ಗಂಟೆಗಳ ಕಾಲ ಸಂಧಾನ ಯತ್ನ ನಡೆಸಿದ ಕೆಂಪಯ್ಯ ರಾಜಿ ಸಂಧಾನ ಯಶಸ್ವಿಯಾಗದೇ ವಾಪಸ್ ಬಂದಿದ್ದಾರೆ ಎನ್ನಲಾಗಿದೆ. ಕೇಸ್ ವಾಪಸ್ ತೆಗೆದು ಕೊಳ್ಳುವಂತೆ ಪತ್ನಿ ಶಿಖಾ ಅವರ ಮನವೊಲಿಸಬೇಕು ಎಂದು ಕೆಂಪಯ್ಯ ಅಜಯ್ ಭೂಷಣ್ ಅವರ ಮೇಲೆ ಒತ್ತಡ ಹಾಕಿದ್ದಾರೆಂದು ಹೇಳಲಾಗಿದೆ.
ಆದರೆ ರಾಜೀ ಸಂಧಾನ ತಿರಸ್ಕರಿಸಿರುವ ಶಿಖಾ ಅವರು, ತಮ್ಮನ್ನು ಬೇರೆಡೆ ವರ್ಗಾವಣೆ ಮಾಡಿದರೂ ಪರವಾಗಿಲ್ಲ, ಕೇಸ್ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿರುವುದಾಗಿ ಅಜಯ್ ನಾಗ್ ಭೂಷಣ್ ಕೆಂಪಯ್ಯ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
Advertisement