ಡಿವೈಎಸ್ ಪಿ ಆತ್ಮಹತ್ಯೆ ಪ್ರಕರಣ: ಆರೋಪಿತ ಅಧಿಕಾರಿ ಕೇಂದ್ರ ಸರ್ಕಾರಿ ಸೇವೆಗೆ ನಿಯೋಜನೆ

ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತ ಅಧಿಕಾರಿಯಾಗಿರುವ ಪ್ರಣಬ್ ಮೊಹಾಂತಿಯವರು ಇದೀಗ ಕೇಂದ್ರ ಸರ್ಕಾರಿ ಸೇವೆಗೆ ನಿಯೋಜನೆಗೊಂಡಿದ್ದಾರೆ...
ಪ್ರಣಬ್ ಮೊಹಾಂತಿ
ಪ್ರಣಬ್ ಮೊಹಾಂತಿ

ಬೆಂಗಳೂರು: ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತ ಅಧಿಕಾರಿಯಾಗಿರುವ ಪ್ರಣಬ್ ಮೊಹಾಂತಿಯವರು ಇದೀಗ ಕೇಂದ್ರ ಸರ್ಕಾರಿ ಸೇವೆಗೆ ನಿಯೋಜನೆಗೊಂಡಿದ್ದಾರೆ.

ಶೀಘ್ರದಲ್ಲೇ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿಯವರು ರಾಜ್ಯದ ಜವಾಬ್ದಾರಿಯುತ ಕೆಲಸಗಳಿಂದ ಬಿಡುಗಡೆಗೊಳ್ಳಲಿದ್ದು, ಈ ಕುರಿತ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಹಿ ಹಾಕಲಿದ್ದಾರೆಂದು ಮೂಲಗಳು ತಿಳಿಸಿವೆ.

ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸಾಕಷ್ಟು ಹಿಂದಿನಿಂದಲೂ ಈ ಪ್ರಕ್ರಿಯೆ ನಡೆಸುತ್ತಿದೆ. ಕೇಂದ್ರ ಲೋಕಸೇವಾ ಆಯೋಗದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಸಾಕಷ್ಟು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಇದೀಗ ಮೊಹಾಂತಿಯವರು ಆಯ್ಕೆಯಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಕೇಂದ್ರದಲ್ಲಿ ಸೇವೆ ಸಲ್ಲಿಸಲು ಮೊಹಾಂತಿ ಎಲ್ಲಾ ರೀತಿಯ ಗುಣಲಕ್ಷಣಗಳನ್ನು ಹೊಂದಿದ್ದಾರೆ. 22 ವರ್ಷದ ತಮ್ಮ ಸೇವೆಯಲ್ಲಿ ಐಪಿಎಸ್ ಅಧಿಕಾರಿಯಾಗಿ, ಸಿಬಿಐನಲ್ಲಿ 7 ವರ್ಷ, ಲೋಕಾಯುಕ್ತ ಮತ್ತು ಇನ್ನಿತರೆ ಪೊಲೀಸ್ ಇಲಾಖೆಯಲ್ಲಿ 14 ವರ್ಷಕ್ಕೂ ಹೆಚ್ಚು, ಸಿಐಡಿಯಲ್ಲಿಯೂ ಸಾಕಷ್ಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆಂದು ಮೊಹಾಂತಿಯವರ ಆಪ್ತರೊಬ್ಬರು ಹೇಳಿದ್ದಾರೆ.

ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (ಯುಐಡಿಎಐ) ಡೆಪ್ಯುಟಿ ಡೈರೆಕ್ಟರ್ ಜನರಲ್ ಹುದ್ದೆಗೆ ಮೊಹಾಂತಿಯವರು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಇದರಂತೆ ಜುಲೈ.8 ರಂದು ಅವರಿಗೆ ಹುದ್ದೆ ದೊರಕಿದೆ. ಇದು ರಾಜ್ಯ ಸರ್ಕಾರದ ಗಮನಕ್ಕೂ ಬಂದಿತ್ತು. ಕಡತಕ್ಕೆ ಮುಖ್ಯಮಂತ್ರಿಗಳ ಸಹಿ ಅವಶ್ಯಕವಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ಮೊಹಾಂತಿಯವರನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಮೊಹಾಂತಿಯವರು ಏನನ್ನೂ ಮಾಡಲು ಸಾಧ್ಯವಿಲ್ಲ. ಗಣಪತಿಯವರು ಎಂದಿಗೂ ಮೊಹಾಂತಿಯವರ ಅಡಿಯಲ್ಲಿ ಕೆಲಸ ಮಾಡಿಲ್ಲ. ಒಂದು ವೇಳೆ ಕಿರುಕುಳ ಪ್ರಕರಣ ಸಾಬೀತಾದರೂ ಮೊಹಾಂತಿ ತನಿಖೆ ಎದುರಿಸಲು ಹೊಸ ಹುದ್ದೆ ರಕ್ಷಣೆ ಮಾಡುವುದಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com