ಮೈಸೂರು: ಅನಾರೋಗ್ಯದಿಂದಾಗಿ ಬೆಲ್ಜಿಯಂನಲ್ಲಿ ಮೃತರಾದ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದು, ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಮೈಸೂರಿನ ಸಾವಿರಾರು ಜನರು ಆಗಮಿಸಿದ್ದಾರೆ.
ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಅನುವು ಮಾಡಿಕೊಡಲಾಗಿದೆ. ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರ ಮೈಸೂರಿಗೆ ಆಗಮಿಸುತ್ತಿದ್ದಂತೆಯೇ ಸಾವಿರಾರು ಜನ ಅಂತಿಮ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಇನ್ನು ಸಿದ್ದರಾಮಯ್ಯ ಪುತ್ರನ ಅಂತಿಮ ದರ್ಶನಕ್ಕೆ ಬಂದಿರುವ ರಾಜಕೀಯ ಗಣ್ಯರೂ ಕೂಡ ವೇದಿಕೆಯಲ್ಲಿ ಅಳವಡಿಸಲಾಗಿರುವ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಪರದಾಡುತ್ತಿದ್ದಾರೆ.
ಅಂತಿಮ ದರ್ಶನಕ್ಕೆ ನಿರೀಕ್ಷೆಗೂ ಮೀರಿ ನಾಯಕರು ಹಾಗೂ ಜನ ಆಗಮಿಸಿದ ಹಿನ್ನಲೆಯಲ್ಲಿ ಎಲ್ಲ ಕುರ್ಚಿಗಳು ಭರ್ತಿಯಾಗಿದ್ದು, ವಿಐಪಿ ಪಾಸ್ ಗಳು ಇದ್ದರೂ ಸಹ ಗಣ್ಯರು ಕುಳಿತುಕೊಳ್ಳಲು ಕುರ್ಚಿಗಳಿಲ್ಲದೆ ಪರದಾಡುತ್ತಿದ್ದಾರೆ. ಮಧ್ಯಾಹ್ನ 1.30ರವರೆಗೂ ಪಾರ್ಥೀವ ಶರೀರ ಅಂತಿಮ ದರ್ಶನ ನಡೆಯಲಿದ್ದು, ಬಳಿಕ ಟಿ.ಕಾಟೂರಿನಲ್ಲಿರುವ ಅವರ ಕುಟುಂಬದ ಮಾಲೀಕತ್ವದ ಫಾರಂ ಹೌಸ್ ನಲ್ಲಿ ಅಂತಿಮ ವಿಧಿವಿಧಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
Advertisement