ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಸಾವಿರಾರು ಮೀನುಗಳ ಮಾರಣ ಹೋಮಕ್ಕೆ ಸಾಕ್ಷಿಯಾಗಿದ್ದ ಹಲಸೂರು ಕೆರೆಯನ್ನು 20 ದಿನಗಳಳೊಗಾಗಿ ಅಭಿವೃದ್ಧಿ ಮಾಡುವಂತೆ ಆಡಳಿತ ಮಂಡಳಿ ಅಧಿಕಾರಿಗಳಿಗೆ ಗಡುವು ನೀಡಿದೆ.
ನಿನ್ನೆಯಷ್ಟೇ ಹಲಸೂರು ಕೆರೆ ಪ್ರದೇಶಕ್ಕೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಮಾಹಿತಿ ಹಾಗೂ ವಾರ್ತಾ ಇಲಾಖೆ ಸಚಿವ ರೋಷನ್ ಬೇಗ್ ಅವರು ಭೇಟಿ ನೀಡಿದ್ದರು. ಈ ವೇಳೆ ಪರಿಶೀಲನೆ ನಡೆಸಿರುವ ಅವರು ಕೆರೆಯಲ್ಲಿ ನೀರಿನ ಗುಣಮಟ್ಟವನ್ನು ಹೆಚ್ಚು ಮಾಡಲು ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಇಂಜಿನಿಯರ್ ಕೆ.ಆರ್ ಮಂಜುನಾಥ್ ಅವರು, ಕೆರೆಯಲ್ಲಿ ಹರಿಯುತ್ತಿದ್ದ ಒಳಚರಂಡಿ ನೀರಿನ್ನು ಈಗಾಗಲೇ ನಿಲ್ಲಿಸಿದ್ದು, ಈ ನೀರನ್ನು ಕೋರಮಂಗಲ ಮತ್ತು ಚಲ್ಲಘಟ್ಟ ವಿಲ್ಲೆ ಎಎಸ್ ಪಿ ಗೆ ಬಿಡಲಾಗಿದೆ. ಇನ್ನು ಕೆರೆಯಲ್ಲಿ ಹಾಕಲಾಗುತ್ತಿದ್ದ ಕಸದ ಸಮಸ್ಯೆಯನ್ನು ಬಿಬಿಎಂಪಿ ನೋಡಿಕೊಳ್ಳುತ್ತಿದ್ದು, ಕಸವನ್ನು ಹಾಕದಂತೆ ಹಲವು ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಚಿವರು ನೀಡಿದ ಸೂಚನೆ ಕುರಿತಂತೆ ಮಾತನಾಡಿರುವ ಅವರು, ಒಳಚರಂಡಿ ನೀರಿನ ಸಮಸ್ಯೆಗೆ ಈಗಾಗಲೇ ಎಂಇಜಿ ಗೇಟ್ ಬಳಿ ಸ್ಥಾವರವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾರ್ಯಗಳು ಗಡುವು ನೀಡಲಾಗಿರುವ 18 ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ, ಕೆರೆಯಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಳ ಮಾಡಲು ಒಂದು ಭಾಗದಲ್ಲಿ ಖಾಸಗಿ ಸಂಸ್ಥೆಯೊಂದರಿಂದ ಪ್ರಾಯೋಗಿಕವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಫಲಿತಾಂಶ ಉತ್ತಮ ರೀತಿಯಲ್ಲಿ ಬಂದರೆ ಇಡೀ ಕೆರೆಗೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎಂದಿದ್ದಾರೆ.
ಒಳಚರಂಡಿ ನೀರು ಕೆರೆಗೆ ಹರಿದು ಬಾರದಂತೆ ಪ್ರತ್ಯೇಕ ಪೈಪ್ ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಟೆಂಡರ್ ಕರೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆಯೂ ಆದೇಶಿಸಲಾಗಿದೆ. ಇನ್ನು ಕೆರೆಯ ನೀರಿನ ಗುಣಮಟ್ಟವನ್ನು ಅಧಿಕಾರಿಗಳು ಪ್ರತಿನಿತ್ಯ ತಪಾಸಣೆ ಮಾಡುತ್ತಾರೆ. ತಪಾಸಣೆ ನಂತರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆಂದು ಹೇಳಿದ್ದಾರೆ.
Advertisement