ತುಮಕೂರು: ಪ್ರವಾಸಿಗರ ತಾಣವಾಗಿರುವ ಏಕಶಿಲಾ ಮಧುಗಿರಿ ಬೆಟ್ಟಕ್ಕೆ (ಕಾರ್ ಕೇಬಲ್) ರೋಪ್ ವೇ ಅಳವಡಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ತುಮಕೂರು ಜಿಲ್ಲೆಯ ಎಕಶಿಲಾ ಮಧುಗಿರಿ ಬೆಟ್ಟದಲ್ಲಿ ರೋಪ್ ವೇ ಅಳವಡಿಸುವ ಕುರಿತಂತೆ ಬುಧವಾರ ಕೋಲ್ಕತಾ ಮೂಲದ ತಾಂತ್ರಿಕ ಪರಿಣಿತರ ತಂಡ ಮಧುಗಿರಿಗೆ ಭೇಟಿ ನೀಡಲಿದ್ದು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಭಾರತದ ಪುರಾತತ್ವ ಇಲಾಖೆಯ ಸಹಾಯದೊಂದಿಗೆ ಅಧ್ಯಯನ ನಡೆಸಲಿದೆ.
2015-16ನೇ ಸಾಲಿನ ರಾಜ್ಯ ಬಜೆಟ್ ಘೋಷಣೆ ವೇಳೆ ಸಿದ್ದರಾಮಯ್ಯ ಅವರು ತುಮಕೂರಿನ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ರೋಪ್ ವೇ ಅಳವಡಿಕೆ ಪರಿಕಲ್ಪನೆ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಂದಿತ್ತು. ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಅವರು ಪ್ರಸ್ತಾಪಿಸಿದ್ದರು, ಆದರೆ, ಈ ಪರಿಕಲ್ಪನೆ ಕೇವಲ ಪರಿಕಲ್ಪನೆಗಳಾಗಿಯೇ ಉಳಿದಿತ್ತು.
ಇನ್ನು ಯೋಜನೆಯ ಜವಾಬ್ದಾರಿ ಹೊತ್ತಿರುವ ಶಾಸಕ ಕೆ.ಎನ್ ರಾಜಣ್ಣ ಅವರು ಈ ಬಗ್ಗೆ ಮಾತನಾಡಿದ್ದು, ರೋಪ್ ವೇ ಅಳವಡಿಸಿದ್ದೇ ಆದರೆ, ವಿಜಯನಗರ ಸಾಮ್ರಾಜ್ಯ ಸಮಯದಲ್ಲಿ ಕಟ್ಟಲಾಗಿದ್ದ ಇಲ್ಲಿನ ಕೋಟೆ, ಕೊಳಗಳು, ಉಗ್ರಾಣ ಹಾಗೂ ಹಲವು ದೇವಾಲಯಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಹೇಳಿದ್ದಾರೆ.
Advertisement