ಧಾರವಾಡ ಜಿಪಂ ಸದಸ್ಯನ ಕೊಲೆ ಕೇಸ್ ಗೆ ಹೊಸ ಟ್ವಿಸ್ಟ್, ಅನಾಮಧೇಯ ಪತ್ರದಲ್ಲಿ ಇಬ್ಬರು ಸಚಿವರ ಹೆಸರು ಉಲ್ಲೇಖ

ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆಗೂ...
ಯೋಗೇಶಗೌಡ
ಯೋಗೇಶಗೌಡ
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆಗೂ ಮುನ್ನ ಯೋಗೀಶಗೌಡರ ಮನೆಗೆ ಅನಾಮಧೇಯ ಪತ್ರವೊಂದು ಬಂದಿದ್ದು, ಆ ಪತ್ರದಲ್ಲಿ ರಾಜ್ಯದ ಪ್ರಭಾವಿ ಸಚಿವರಿಬ್ಬರ ಹೆಸರನ್ನು ಉಲ್ಲೇಖಿಸಲಾಗಿದೆ.
ಪತ್ರದ ಸಾರಾಂಶ ಹೀಗಿದೆ...
ನಮಸ್ಕಾರ ಯೋಗೇಶ ಗೌಡ್ರುಗೆ,
ನಿಮ್ಮ ಅಣ್ಣ ಉದಯಗೌಡ ಅವರನ್ನು ಕೊಲೆ ಮಾಡಿಸಿದವರು ವಿನಯ್ ಕುಲಕರ್ಣಿ ಹಾಗೂ ಎಚ್..ಕೆ.ಪಾಟೀಲ್. ಅವರು ಮತ್ತೆ ಸಮಯ ನೋಡಿ ನಿಮ್ಮನ್ನೂ ಕೊಲೆ ಮಾಡಿಸಬೇಕೆಂದು ಕೆಲ ದಿನಗಳಿಂದ ಕಾಯುತ್ತಿದ್ದಾರೆ. ನಾನು ಯಾರು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಡಿ. ಮುಂದೆ ನಿಮಗೆ ಎಲ್ಲಾ ರೀತಿಯ ಮಾಹಿತಿಯನ್ನು ಪತ್ರದ ಮೂಲಕ ತಿಳಿಸುತ್ತೇನೆ. ನಿಮ್ಮ ಸಹಾಯ ನನಗೆ ಬೇಕಾಗುತ್ತದೆ. ಆಗ ನಾನೇ ನಿಮ್ಮ ಹತ್ತಿರ ಬರುತ್ತೇನೆ. ಸಹಾಯ ಮಾಡಿ ಎಂದು ಬರೆದು, ಸಹಿ ಮಾಡಿ ಧನ್ಯವಾದ ಎಂದಿದ್ದಾರೆ. 
ಈ ಪತ್ರ ಯೋಗೀಶಗೌಡ ಅವರ ಹತ್ಯೆಯ ಮೊದಲ ದಿನ ಅವರ ಮನೆಗೆ ಬಂದಿತ್ತು. ಹಾಳೆಯ ತ್ರಿಕೋನ ಆಕಾರದಲ್ಲಿ ಪತ್ರವನ್ನು ಬರೆದು ಕೊಟ್ಟು ಹೋಗಲಾಗಿದೆ. ಆದರೆ ಈ ಪತ್ರವನ್ನು ಬರೆದವರ್ಯಾರು?  ಇವರಿಗೆ ಕೊಲೆ ಮಾಡುವ ಸಂಚು ರೂಪಿಸುತ್ತಿದ್ದಾರೆ ಎಂಬ ಸುಳಿವು ಕೊಟ್ಟವರು ಯಾರು? ಈ ಅನಾಮಧೇಯ ವ್ಯಕ್ತಿ ಯಾರು ಎಂಬ ಅನುಮಾನ ಸ್ಥಳೀಯರಲ್ಲಿ ಹಾಗೂ ಪೊಲೀಸರನ್ನು ಕಾಡುತ್ತಿದೆ. ಅಲ್ಲದೇ ಪತ್ರದಲ್ಲಿ ಇಬ್ಬರು ರಾಜಕಾರಣಿಗಳ ಹೆಸರನ್ನು ಬರೆಯಲಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಅನಾಮಧೇಯ ಪತ್ರವನ್ನು ಯೋಗೇಶ ಗೌಡ ಕುಟುಂಬಸ್ಥರು ಧಾರವಾಡ ಉಪನಗರ ಪೊಲೀಸರಿಗೆ ನೀಡಿದ್ದು, ಪೊಲೀಸರು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ಯೋಗೀಶಗೌಡ ಅವರನ್ನು ಸಪ್ತಾಪುರದಲ್ಲಿರುವ ಅವರ ಜಿಮ್ ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಕೆಲವು ವರ್ಷಗಳ ಹಿಂದೆ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಅವರ ಹಿರಿಯ ಸಹೋದರ ಉಯಗೌಡ ಅವರನ್ನು ಸಹ ಹತ್ಯೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com