ಮೈಸೂರು: ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ರನ್ನು ಹೆಗಲ ಮೇಲೆ ಹೊತ್ತು ಕುಣಿದಾಡಿದ ಅಧಿಕಾರಿಗಳ ವಿರುದ್ಧ ಪೊಲೀಸ್ ಇಲಾಖೆ ಶಿಸ್ತು ಕ್ರಮ ಜರುಗಿಸಿದ್ದು, ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದು ತಿಳಿದುಬಂದಿದೆ.
ಮರಳು ಮಾಫಿಯಾದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿರುವ ಸುನೀಲ್ ಅವರನ್ನು, ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕಾದ ಪೊಲೀಸರೇ ತಮ್ಮ ಹುದ್ದೆಯ ಘನತೆಯನ್ನು ಮರೆತು ಹೆಗಲ ಮೇಲೆ ಹೊತ್ತು ಕುಣಿದಾಡುತ್ತಿರುವ ಫೋಟೋ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಲಾಖೆಯು ಇದೀಗ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದು, ನರಸೀಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಂ.ಶಿವಣ್ಣ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಚಾಮರಾಜ ನಗರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿಃ ಇನ್ಸ್ ಪೆಕ್ಟರ್ ರಾಘವೇಂದ್ರ ಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪ್ರಕರಣದ ಕುರಿತು ಎಎಸ್ ಪಿ ದಿವ್ಯಾಸಾರ ಥಾಮಸ್ ಅವರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಮಧ್ಯಂತರ ವರದಿಯನ್ನು ಸಲ್ಲಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಆಕ್ಷೇಪಾರ್ಹ ನಡವಳಿಕೆ ತೋರಿರುವುದಾಗಿ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಶಾಸಕನ ಪುತ್ರನೊಂದಿಗೆ ಎರಡು ತಿಂಗಳ ಹಿಂದೆ ಪಾರ್ಟಿ ಮಾಡಲಾಗಿದೆ. ಆದರೆ, ಫೋಟೋದಲ್ಲಿರುವ ಸ್ಥಳದ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಫೋಟೋ ಕುರಿತಂತಿರುವ ಅನುಮಾನಗಳು ಈ ವರೆಗೂ ಬಗೆಹರಿದಿಲ್ಲ. ವಿಚಾರಣೆಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಎಸ್ ಪಿ ಅಭಿನವ್ ಖರೆ ಅವರು ಹೇಳಿದ್ದಾರೆ.
ಸುನಿಲ್ ಬೋಸ್ ಅವರು ಕೆಟ್ಟ ವ್ಯಕ್ತಿಯೆಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಸುನೀಲ್ ಬೋಸ್ ರೊಂದಿಗೆ ಪೊಲೀಸರು ಪಾರ್ಟಿ ಮಾಡಿರುವುದು ತಪ್ಪು ಎಂದು ನನಗನ್ನಿಸುತ್ತಿಲ್ಲ. ಸಮನ್ಸ್ ನೀಡುವುದಕ್ಕೂ ಮುನ್ನ ಅಥವಾ ಸಮನ್ಸ್ ನೀಡಿದ ನಂತರ ಪಾರ್ಟಿ ನಡೆದಿದೆಯೇ ಎಂಬುದು ನಮಗೆ ಗೊತ್ತಿಲ್ಲ. ಪ್ರಕರಣದಲ್ಲಿ ಅಧಿಕಾರಿಗಳು ದೊಡ್ಡದಾದ ಅಶಿಸ್ತನ್ನು ಪಾಲಿಸಿದ್ದಾರೆಂದು ಅನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಸಂಖ್ಯೆ ಕಡಿಮೆಯಾಗಿದೆ
ಈ ಹಿಂದಿದ್ದ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗೆಂದ ಮಾತ್ರಕ್ಕೆ ಅಕ್ರಮ ಗಣಿಗಾರಿಕೆ ಸಂಪೂರ್ಣವಾಗಿ ನಿಂತಿದೆ ಎಂದು ಹೇಳುತ್ತಿಲ್ಲ. ದಿನಕ್ಕೆ 600 ಲೋಡ್ ಗಳಷ್ಟಿದ್ದದ್ದು ಇದೀಗ 10-12ಕ್ಕೆ ಇಳಿದಿದೆ. ನಮ್ಮ ಕಾರ್ಯಾಚರಣೆಯನ್ನು ನಾವು ಮುಂದುವರೆಸುತ್ತೇವೆಂದು ಹೇಳಿದ್ದಾರೆ.
Advertisement