ಕೋಲಾರ ಚಿನ್ನದ ಗಣಿಗೆ ಮತ್ತೆ "ಸುವರ್ಣ ಯುಗ"

ಕಳೆದ 15 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಕೋಲಾರದ ಕೆಜಿಎಫ್ ನಲ್ಲಿರುವ ಚಿನ್ನದ ಗಣಿಯಲ್ಲಿ ಮತ್ತೆ ಸುವರ್ಣ ಯುಗ ಆರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ...
ಕೋಲಾರದ ಚಿನ್ನದ ಗಣಿ (ಸಂಗ್ರಹ ಚಿತ್ರ)
ಕೋಲಾರದ ಚಿನ್ನದ ಗಣಿ (ಸಂಗ್ರಹ ಚಿತ್ರ)

ಕೋಲಾರ: ಕಳೆದ 15 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಕೋಲಾರದ ಕೆಜಿಎಫ್ ನಲ್ಲಿರುವ ಚಿನ್ನದ ಗಣಿಯಲ್ಲಿ ಮತ್ತೆ ಸುವರ್ಣ ಯುಗ ಆರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಕರ್ನಾಟಕ ಸರ್ಕಾರ ಬಿಜಿಎಂಎಲ್‌ನ ಹಳೇ ಉದ್ಯೋಗಿಗಳು, ಆಸ್ಟ್ರೇಲಿಯಾದ ಗಣಿ ಕಂಪನಿ, ಹಲವು ವಿದೇಶಿ ಹಣಕಾಸು ಸಂಸ್ಥೆಗಳನ್ನು ಒಳಗೊಂಡ ವಿಶೇಷ ಉದ್ದೇಶದ ಸಂಸ್ಥೆಯ (ಸ್ಪೆಷಲ್  ಪರ್ಪಸ್ ವೆಹಿಕಲ್) ನಡುವೆ ಒಪ್ಪಂದ ಮಾಡಿಕೊಂಡಿದ್ದು, ಜಂಟಿಯಾಗಿ ಗಣಿ ಪುನರಾರಂಭ ಕಾರ್ಯ ಕೈಗೆತ್ತಿಕೊಳ್ಳಲಿವೆ ಎಂದು ತಿಳಿದುಬಂದಿದೆ. ವಿದೇಶಿ ನೇರ ಹೂಡಿಕೆಯ ಮೂಲಕ ಗಣಿ  ಉತ್ತೇಜನಕ್ಕೆ 1,500 ಕೋಟಿ ರು. ಬಂಡವಾಳ ತೊಡಗಿಸಲು ವಿಶೇಷ ಉದ್ದೇಶದ ಸಂಸ್ಥೆ ಒಪ್ಪಿಕೊಂಡಿದೆ. ಆಳವಲ್ಲದ ಚಿನ್ನದ ಗಣಿಗಾರಿಕೆಯ ಜತೆಗೆ 13 ದಶಲಕ್ಷ ಟನ್‌ಗಳಷ್ಟಿರುವ ಮಣ್ಣಿನ ರಾಶಿ  ಅಥವಾ ಸೈನೇಡ್ ಗುಡ್ಡದಿಂದಲೂ ಚಿನ್ನವನ್ನು ತೆಗೆಯುವ ಕೆಲಸಕ್ಕೆ ಸಂಸ್ಥೆ ಕೈ ಹಾಕಲಿದೆ.

ಇದರಿಂದ 1,200 ಮಂದಿ ಬಿಜಿಎಂಎಲ್‌ನ ಹಳೇ ಉದ್ಯೋಗಿಗಳು ಅಥವಾ ಅವರ ಕುಟುಂಬದ ಸದಸ್ಯರಿಗೆ ಮತ್ತೆ ಉದ್ಯೋಗ ಸಿಗಲಿದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ  ಆದರೆ ಇದೇ ಆಗಸ್ಟ್15 ರಂದು ಮತ್ತೆ ಚಿನ್ನದ ಗಣಿಗಾರಿಕೆ ಆರಂಭಗೊಳ್ಳಲಿದೆ. ಇದಕ್ಕೆ ಏಕಗವಾಕ್ಷಿ ಏಜೆನ್ಸಿ ಮತ್ತು ರಾಜ್ಯ ಉನ್ನತ ಮಟ್ಟದ ಸಮಿತಿಯಿಂದ ಒಪ್ಪಿಗೆ ಸಿಗುವುದು ಬಾಕಿ ಇದೆ. ದಿಬ್ಬದ  ರಾಶಿಯಲ್ಲಿರುವ ಮಣ್ಣಿನಿಂದಲೇ 25 ಸಾವಿರ ಕೋಟಿ ರುಪಾಯಿ ಮೌಲ್ಯದ ಚಿನ್ನ ತೆಗೆಯಲು ಸಾಧ್ಯವಿದೆ. ಒಂದು ಟನ್ ಅದಿರಿನಿಂದ ಕನಿಷ್ಠ 12 ಗ್ರಾಂ ಚಿನ್ನ ತೆಗೆಯಬಹುದಾಗಿದೆ ಮತ್ತು 300 ಅಡಿ  ಆಳದವರೆಗೆ, ಮುಂದಿನ 25 ವರ್ಷಗಳವರೆಗೆ ಗಣಿಗಾರಿಕೆ ನಡೆಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಒಟ್ಟಾರೆ ದಶಕಗಳ ಹಿಂದೆ ಸ್ಥಗಿತಗೊಂಡಿದ್ದ ಕೆಜಿಎಫ್ ಗಣಿ ಪುನಾರಂಭದೊಂದಿಗೆ ಭವಿಷ್ಯದ ವಿಶ್ವಾಸವನ್ನೇ ಕಳೆದುಕೊಂಡಿದ್ದ ಸ್ಥಳೀಯರ ಉದ್ಯೋಗಿಳಲ್ಲಿ ಇದೀಗ ಭರವಸೆಯ ಆಶಾಭಾವ  ಮೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com