ಬೆಂಗಳೂರು: ನಗರದ ಬನಶಂಕರಿ 3ನೇ ಹಂತ ಕತ್ರಿಗುಪ್ಪೆ ಸಮೀಪವಿರುವ ಕೆಇಬಿ ಲೈ ಔಟ್ ನ ಗ್ಯಾಸ್ ಏಜೆನ್ಸಿ ಗೋದಾನಿನಲ್ಲಿ ಶನಿವಾರ 20 ಸಿಲಿಂಡರ್ ಗಳು ಸ್ಫೋಟಗೊಂಡು ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ಬಿಗುವಿನ ವಾತಾವರಣವನ್ನು ನಿರ್ಮಾಣವಾಗುವಂತೆ ಮಾಡಿತ್ತು.
ನಿನ್ನೆ ಬೆಳಿಗ್ಗೆ 5.30ರ ಸುಮಾರಿಗೆ ಘಟನೆ ನಡೆದಿದ್ದು, ಸಿಲಿಂಡರ್ ಗಳು ಸ್ಫೋಟಗೊಂಡು ಕೆಲವು ಗಂಟೆಗಳ ಕಾಲ ಶಬ್ಧವನ್ನುಂಟು ಮಾಡಿದೆ. ಗೋದಾಮಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರೊಂದು ಸಂಪೂರ್ಣವಾಗಿ ಭಸ್ಮವಾಗಿದೆ. ಅಲ್ಲದೆ, 3 ವಾಹನಗಳು ಭಾಗಶಃ ಹಾನಿಗೊಳಗಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ. ಆದರೆ, ಸ್ಥಳೀಯರು ಸ್ಫೋಟಗೊಂಡ ಶಬ್ಧ ಕೇಳಿ ಬಾಂಬ್ ಸ್ಫೋಟವೆಂದು ಬೆದರಿಸಿದ್ದಾರೆ.
ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ಗೋದಾಮು ಸಾಕಷ್ಟು ಹಾನಿಗೊಳಪಟ್ಟಿದ್ದು, ಕೆಲವು ಸಿಲಿಂಡರ್ ಗಳು ಹಾರಿ ಅಕ್ಕಪಕ್ಕದ ಮನೆಗಳಿಗೆ ಬಡಿದಿವೆ. ಇದರ ಪರಿಣಾಮ ಅಕ್ಕಪಕ್ಕ ಮನೆಗಳ ಕಿಟಕಿ ಗಾಜುಗಳ ಪುಡಿಪುಡಿಯಾಗಿದ್ದು, ಕೆಲ ಗೋಡೆಗಳು ಬಿರುಕು ಬಿಟ್ಟಿವೆ ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಮಾತನಾಡಿರುವ ಸ್ಥಳೀಯರ ರಾಜೇಶ್ ಎಂಬುವವರು, ಮೊದಲನೇ ಬಾರಿಗೆ ಸ್ಫೋಟದ ಶಬ್ಧ ಕೇಳಿಸಿದಾಗ ಇದೊಂದು ಉಗ್ರ ದಾಳಿ ಇರಬಹುದೆಂದು ತಿಳಿದೆವು. ನಂತರ ಸ್ಫೋಟ ಶಬ್ಧ 20 ನಿಮಿಷಗಳ ಮುಂದುವರೆಯಿತು. ಶಬ್ಧವು 2 ಹಾಗೂ 3ನೇ ಮಹಡಿಯಲ್ಲಿರುವವರಿಗೂ ಕೇಳಿಬರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ಗ್ಯಾಸ್ ಲೀಕ್ ಆದ್ದರಿಂದ ಘಟನೆ ನಡೆದಿದೆ. ಬೆಂಕಿ ನಂದಿಸಲು ಸುಮಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. 3 ವಾಹನಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ವಸತಿ ಪ್ರದೇಶಗಳಲ್ಲಿ ಸಿಲಿಂಡರ್ ಏಜೆನ್ಸಿ ತೆರೆಯಲು ಅವಕಾಶವಿರುವುದಿಲ್ಲ. ಆದರೆ, ಈ ನಿಯಮವನ್ನು ಉಲ್ಲಂಘಿಸಿ ಏಜೆನ್ಸಿ ಮಾಲೀಕ ಮಲ್ಲಿಕಾರ್ಜುನ ಎಂಬುವವರು ಶ್ರೀ ಮಹಾಲಕ್ಷ್ಮಿ ಇಂಡೋ ಗ್ಯಾಸ್ ಏಜೆನ್ಸಿಯನ್ನು ವಸತಿ ಪ್ರದೇಶದಲ್ಲಿ ತೆರೆದಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಮಾಲೀಕ ಮಲ್ಲಿಕಾರ್ಜುನ ತಲೆಮರೆಸಿಕೊಂಡಿದ್ದಾರೆ. ಪ್ರಸ್ತುತ ಬನಶಂಕರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಲ್ಲಿಕಾರ್ಜುನಗಾಗಿ ಹುಡುಕಾಟ ಆರಂಭಿಸಿದ್ದಾರೆಂದು ತಿಳಿದುಬಂದಿದೆ.
Advertisement