ಕಲಬುರ್ಗಿ: ಕಬ್ಬಿನ ಯಂತ್ರಕ್ಕೆ ಕೈ ಸಿಲುಕಿ 10 ವರ್ಷದ ಪುಟ್ಟ ಬಾಲಕನೊಬ್ಬನ ಕೈ ಕತ್ತರಿಸಿ ಹೋದ ಘಟನೆ ಕಲಬುರ್ಗಿಯಲ್ಲಿ ಬುಧವಾರ ನಡೆದಿದೆ.
ಕಲಬುರ್ಗಿಯ ಸೇಡಂ ಪಟ್ಟಣದ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿನ ರಸ್ತೆಯಲ್ಲಿ ಬುಧವಾರ ಕಬ್ಬು ಅರೆಯಲು ಹೋಗಿ ಬಾಲಕ ಕಾರ್ಮಿಕನೊಬ್ಬ ಕೈ ಕಳೆದುಕೊಂಡಿದ್ದಾನೆ. ಸಂತ್ರಸ್ಥ ಬಾಲಕನನ್ನು ಭೀಮಾಶಂಕರ ಸೂರ್ಯಕಾಂತ (10 ವರ್ಷ) ಎಂದು ತಿಳಿದುಬಂದಿದ್ದು, ಇತ್ತೀಚೆಗಷ್ಟೇ ಈತ ಕಬ್ಬಿನ ಹಾಲಿನ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಬುಧವಾರ ಯಂತ್ರದ ಮೂಲಕ ಕಬ್ಬಿನ ಹಾಲನ್ನು ಉತ್ಪಾದಿಸಿ ಸಿಪ್ಪೆಯನ್ನು ಹೊರ ತೆಗೆಯುವಾಗ ಅವಘಡ ಸಂಭವಿಸಿದ್ದು, ಕೂಡಲೇ ಆತನನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೆ ಕೈ ಸಂಪೂರ್ಣ ನಜ್ಜುಗುಜ್ಜಾಗಿದ್ಜರಿಂದ ಕೈಯನ್ನು ತೆಗೆಯಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಪ್ರಸ್ತುತ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಬ್ಬಿನ ಹಾಲಿನ ಅಂಗಡಿಯ ಮಾಲೀಕರು, ಹುಡುಗನ ಮನೆಯಲ್ಲಿ ತೀವ್ರ ಕಷ್ಟವಿದ್ದರಿಂದ ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಆತನಿಗೆ ನಿತ್ಯ 150 ರು ಕೂಲಿ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.
Advertisement