ಬೆಂಗಳೂರು: ಪದ್ಮನಾಭ ನಗರ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮೂರು ಪ್ರದೇಶಗಳ ನಾಗರಿಕರಿಗೆ ಪೂರೈಕೆಯಾಗಿರುವ ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರಿರುವ ಆರೋಪ ಕೇಳಿಬಂದಿದೆ. ಕಳೆದ 6 ತಿಂಗಳಲ್ಲಿ 4 ನೇ ಬಾರಿಗೆ ಇಂತಹ ಸಮಸ್ಯೆ ಎದುರಾಗಿದ್ದು, ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ರಾಧಾಕೃಷ್ಣ ಲೇಔಟ್, ಗುರುರಾಜ ಲೇಔಟ್, ಮುನೇಶ್ವರ ನಗರದ ನಿವಾಸಿಗಳಿಗೆ ಇಂಥಹ ಸಮಸ್ಯೆ ಕಾಣಿಸಿಕೊಂಡಿದ್ದು ತಕ್ಷಣವೇ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್ ತಕ್ಷಣವೇ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು ಪರೀಕ್ಷೆ ಮಾಡಲು ನೀರನ್ನು ಕೊಂಡೊಯ್ದಿದ್ದು, ಸಾರ್ವಜನಿಕರಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಿದ್ದಾರೆ.
ಕುಡಿಯುವ ನೀರಿನಲ್ಲಿ ಮಣ್ಣು ಕಂಡು ಬಂದ ಹಿನ್ನೆಲೆಯಲ್ಲಿ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಚರಂಡಿ ನೀರು ಸೇರಿಕೊಂಡಿದೆ ಎಂಬ ಮಾಹಿತಿ ದೊರೆತಿದ್ದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
" ಬಿಡಬ್ಲ್ಯೂ ಎಸ್ ಎಸ್ ಬಿ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ದಿನನಿತ್ಯದ ಅಗತ್ಯಗಳಿಗಾಗಿ ಮಿನರಲ್ ನೀರನ್ನೆ ಖರೀದಿಸಬೇಕಾಯಿತು, ಆದರೂ ಅಧಿಕಾರಿಗಳು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿದರು" ಎಂದು ಸ್ಥಳೀಯ ನಿವಾಸಿಯಾದ ಲಕ್ಷ್ಮಿ ತಿಳಿಸಿದ್ದಾರೆ.
ಸಾರ್ವಜನಿಕರು ದೂರು ನೀಡಿದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕುಡಿಯುವ ನೀರು ಬಳಕೆ ಮಾಡುವುದಕ್ಕೆ ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿದರು. ಆದರೆ ಇಂತಹ ಸಮಸ್ಯೆ 6 ತಿಂಗಳಲ್ಲಿ 4 ನೇ ಬಾರಿಗೆ ಎದುರಾಗಿದೆ ಎಂದು ಪದ್ಮನಾಭ ನಗರ ವಾರ್ಡ್ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ವಾಸಿಸುತ್ತಿರುವ ನಟಿ ಶ್ರೀದೇವಿ ಹೇಳಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗ ಕುಡಿಯುವ ನೀರು ಕಲುಶಿತಗೊಳ್ಳುವ ಸಾಧ್ಯತೆ ಇದೆ. ಹೋಟೆಲ್ ಗಳು ಹಲವು ತ್ಯಾಜ್ಯ ವಸ್ತುಗಳನ್ನು ನೇರವಾಗಿ ಯುಜಿಡಿ ಪೈಪ್ ಗಳಿಗೆ ಕಳಿಸುವುದರಿಂದ ಪೈಪ್ ಗಳು ಕಟ್ಟಿಕೊಂಡು ಕುಡಿಯುವ ನೀರಿನೊಳಗೆ ತ್ಯಾಜ್ಯ ಸೇರಿಕೊಳ್ಳುವುದಕ್ಕೆ ಕಾರಣವಾಗಲಿದೆ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳು ಹೇಳಿದ್ದಾರೆ.
Advertisement