ಖಳನಟ ಅನಿಲ್, ಉದಯ್ ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯಾಚರಣೆ: ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ಕೇಸ್

ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಲ್ಲಿ ಮುಳುಗಿ ಮೃತಪಟ್ಟಿದ ಖಳನಟ ಅನಿಲ್ ಮತ್ತು ಉದಯ್ ಅವರ ಮೃತದೇಹಗಳಿಗಾಗಿ ನ.8 ರಂದು ಬೆಳಿಗ್ಗೆ ಶೋಧಕಾರ್ಯಾಚರಣೆ ಮುಂದುವರೆದಿದೆ.
ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯಾಚರಣೆ
ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯಾಚರಣೆ
ಬೆಂಗಳೂರು: ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಲ್ಲಿ ಮುಳುಗಿ ಮೃತಪಟ್ಟಿದ ಖಳನಟ ಅನಿಲ್ ಮತ್ತು ಉದಯ್ ಅವರ ಮೃತದೇಹಗಳಿಗಾಗಿ ನ.8 ರಂದು ಬೆಳಿಗ್ಗೆ ಶೋಧಕಾರ್ಯಾಚರಣೆ ಮುಂದುವರೆದಿದೆ. 
ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ಆಗಮಿಸಿದ್ದು, ನಟರ ಮೃತದೇಹಗಳಿಗಾಗಿ ಎರಡನೆ ದಿನ ತಿಪ್ಪಗೊಂಡನ ಹಳ್ಳಿ ಡ್ಯಾಂ ಬಳಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಎನ್ ಡಿಆರ್ ಎಫ್ ಇನ್ಸ್ ಪೆಕ್ಟರ್ ಕೇಶವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಅವಗಢದಲ್ಲಿ ಪಾರಾಗಿದ್ದ ಮಾಸ್ತಿಗುಡಿ ಚಿತ್ರದ ನಾಯಕ ನಟ ದುನಿಯಾ ವಿಜಯ್ ಎನ್ ಡಿ ಆರ್ ಎಫ್ ತಂಡದೊಂದಿಗೆ ಸ್ಥಳದಲ್ಲೇ ಇದ್ದಾರೆ.    
ಚಿತ್ರತಂಡದ ವಿರುದ್ಧ ದೂರು ದಾಖಲು:
ಇನ್ನು ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಬೇಜವಾಬ್ದಾರಿತನದಿಂದ ಚಿತ್ರೀಕರಣ ನಡೆಸಿದ್ದ ಚಿತ್ರತಂಡದ ವಿರುದ್ಧ ಜಲಾಶಯದ ಅಧೀಕ್ಷಕಿ ಅನಸೂಯ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದ್ದು, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ, ನಿರ್ಮಾಪಕ ಸುಂದರ್, ಚಿತ್ರತಂಡದ ಯುನಿಟ್ ಮ್ಯಾನೇಜರ್ ಭರತ್ ವಿರುದ್ಧ ಸೆಕ್ಷನ್ 304, 188 ಸಹ ಕಲಂ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಮಾಸ್ತಿಗುಡಿ ಚಿತ್ರತಂಡ ತಿಪ್ಪಗೊಂಡನ ಹಳ್ಳಿ ಜಲಾಶಯದ ಬಳಿ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದೂ ಅಲ್ಲದೇ, ಹೆಲಿಕಾಫ್ಟರ್ ನ್ನು ಬಳಸಿ ಚಿತ್ರೀಕರಣ ಮಾಡುವಂತಿಲ್ಲ ಎಂಬ ನಿಯಮಗಳನ್ನು ಉಲ್ಲಂಘಿಸಿ ಚಿತ್ರೀಕರಣ ನಡೆಸಿದ್ದರು. ಖಳನಟರು ಹೆಲಿಕಾಫ್ಟರ್ ನಿಂದ ನೀರಿಗೆ ಜಿಗಿಯುವ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com