ಬೆಳಗಾವಿ: ಕನ್ನಡ ಪ್ರಾಥಮಿಕ ಸರ್ಕಾರಿ ಶಾಲೆ ನಂ.17ರ ಕೊಠಡಿಯೊಂದಕ್ಕೆ ಕಿಡಿಗೇಡಿಗಳು ಭಾನುವಾರ ಮಧ್ಯರಾತ್ರಿ ಬೆಂಕಿ ಹಚ್ಚಿದ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.
ಶಹಾಪುರ ಪೊಲೀಸ್ ಠಾಣೆಯ ಆವರಣದ ಗೋಡೆಗೆ ಹೊಂದಿಕೊಂಡಂತೆ ಶಾಲೆ ಇದ್ದರೂ ಈ ಘಟನೆ ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಶಿಕ್ಷಕರು ಶಾಲೆಗೆ ಬಂದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ನಗರ ವಲಯ ಬಿಇಓ ಬಸವರಾಜ ನಾಲತವಾಡ, ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಯ 7ನೇ ತರಗತಿಯ ಕೊಠಡಿಯೊಳಗೆ ರಾತ್ರಿ ನುಗ್ಗಿದ ಕಿಡಿಗೇಡಿಗಳು ಅಲ್ಲಿದ್ದ ಪಠ್ಯಪುಸ್ತಕಗಳು, ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ, ಆರೋಗ್ಯ ತಪಾಸಣೆ ಕಾರ್ಡ್, ಪ್ರಾಜೆಕ್ಟ್ ವರದಿಗಳಿಗೆ ಬೆಂಕಿ ಹಚ್ಚಿ, ಆದಾರ್ ಕಾರ್ಡ್, ಪಡಿತರ ಕಾರ್ಡ್, ವಿಟಮಿನ್ ಮಾತ್ರೆ ಸೇರಿದಂತೆ ಹಲವು ವಸ್ತುಗಳನ್ನು ಸುಟ್ಟುಹಾಕಿದ್ದಾರೆ. ಇನ್ನು ಕಿಡಿಗೇಡಿಗಳು ಶಾಲಾ ಆವರಣದಲ್ಲಿ ಮಧ್ಯಪಾನ ಸೇವಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಇದಕ್ಕೂ ಮೊದಲು ಹಲವು ಬಾರಿ ಇದೇ ರೀತಿ ಕೆಲ ಕಿಡಿಗೇಡಿಗಳು ಶಾಲೆಯ ಹಲವು ವಸ್ತುಗಳನ್ನು ಹಾನಿ ಮಾಡಿದ್ದರು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ರಾತ್ರಿ ವೇಳೆ ಶಾಲೆ ಆವರಣದೊಳಗೆ ಪ್ರವೇಶಿಸುತ್ತಿದ್ದ ಇಬ್ಬರು ಯುವಕರನ್ನು ಕರೆದು ಪೊಲೀಸರು ಎಚ್ಚರಿಕೆ ನೀಡಿದ್ದರು.
Advertisement