ಬೆಂಗಳೂರು: ಅಂಡರ್ ಪಾಸ್ ಯೋಜನೆಗೆ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಸಿಗದೆ ಹತಾಶರಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಕುಟುಂಬಕ್ಕೆ ಬಿಡಿಎ 25 ಲಕ್ಷ ರೂ. ಪರಿಹಾರದ ಚೆಕ್ ಮಂಗಳ ಅವರ ಪುತ್ರ ಕಾರ್ತಿಕ್ ಅವರಿಗೆ ನೀಡಿದೆ.
ವರ್ತುಲ ರಸ್ತೆಯ ಕಂಠೀರವ ಸ್ಟುಡಿಯೋ ಜಂಕ್ಷನ್ನಲ್ಲಿ ಬಿಡಿಎ ನಿರ್ಮಿಸುತ್ತಿರುವ ಗ್ರೇಡ್ ಸೆಪರೇಟರ್ ಯೋಜನೆಗೆ ಜಮೀನು ಬಿಟ್ಟುಕೊಟ್ಟಿದ್ದರೂ ಮಂಗಳಾ ಕುಟುಂಬಕ್ಕೆ ಪರಿಹಾರ ದೊರೆತಿರಲಿಲ್ಲ. ಇದಕ್ಕೆ ಮಂಗಳಾ, ಸೋಮವಾರ ಬಿಡಿಎ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದರು. ಮಂಗಳಾ ಅವರ ಕುಟುಂಬಕ್ಕೆ 3.76 ಕೋಟಿ ರೂ. ಪರಿಹಾರವನ್ನು ಬಿಡಿಎ ನೀಡಬೇಕಿದೆ. ಉಳಿದ ಹಣವನ್ನು ಸದ್ಯದಲ್ಲೇ ಕಂತುಗಳಾಗಿ ವಿತರಿಸುವುದಾಗಿ ಬಿಡಿಎ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜೊತೆಗೆ ಇತರೆ 17 ಮಂದಿಗೂ ಭೂ ಪರಿಹಾರ ವಿತರಿಸಿದ್ದು, ಬಾಕಿ ಹಣವನ್ನು ಶೀಘ್ರ ನೀಡುವ ಭರವಸೆ ನೀಡಲಾಗಿದೆ.
ಪರಿಹಾರ ಹಣ ನೀಡುವಂತೆ ಶಾಸಕ ಕೆ.ಗೋಪಾಲಯ್ಯ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಮಣಿದಿರುವ ಬಿಡಿಎ, ಸಂಜೆ ವೇಳೆಗೆ ಮಂಗಳಾ ಸೇರಿದಂತೆ 18 ಕುಟುಂಬಕ್ಕೆ ತಲಾ 25 ಲಕ್ಷ ರೂ. ಹಣವನ್ನು ಚೆಕ್ ಮೂಲಕ ವಿತರಿಸಿದೆ. ಪ್ರತಿಭಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದ ಬಿಡಿಎ ಅಧಿಕಾರಿಗಳು ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವ ವಾಗ್ದಾನ ನೀಡಿದರು.
ಒಟ್ಟು 72 ಆಸ್ತಿಗಳ ಮಾಲೀಕರಿಗೆ ಬಿಡಿಎ 131 ಕೋಟಿ ರೂ ಪರಿಹಾರ ಹಣ ನೀಡಬೇಕಾಗಿದೆ.
Advertisement