ಬೆಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಹಂತಕರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರ್.ಟಿ. ನಗರದ ಮಹಮದ್ ಮುಜೀಬುಲ್ಲಾ ಅಲಿಯಾಸ್ ಮುಜೀಬ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿಗಳು ಕಮರ್ಷಿಯಲ್ ಸ್ಟ್ರೀಟ್ ನಿಂದ ಪರಾರಿಯಾಗಿದ್ದರು. ಆದರೆ ಎರಡು ದಿನಗಳ ನಂತರ ಇಬ್ಬರು ಪ್ರತ್ಯೇಕವಾಗಿ ಬೈಕ್ ಪಾರ್ಕಿಂಗ್ ಮಾಡಿ ಕೊಲವೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಹೇಗಿದೆ ಎಂದು ನೋಲು ಬಂದಿದ್ದಾರೆ.ಇದಾದ ನಂತರ ಮುಜಿಬುಲ್ಲಾ ಎಂದಿನಂತೆ ತನ್ನ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ.
ಇತ್ತ ಪೊಲೀಸರು ಸ್ಥಳೀಯರು ನೀಡಿದ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಸ್ಕೆಚ್ ಬಿಡುಗಡೆ ಮಾಡಿದ್ದರು. ಆರೋಪಿ ಶಂಕಿತ ರೇಖಾ ಚಿತ್ರದ ಆಧಾರದ ಮೇಲೆ, ಪೊಲೀಸರು ಮುಜಿಬುಲ್ಲಾ ನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ನಂತರ ಆತನನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ. ಜೊತೆಗೆ ಉಳಿದ ಆರೋಪಿಗಳ ವಿವರ ತಿಳಿಸಿದ್ದಾನೆ.
ಮುಜಿಬುಲ್ಲಾ ಮಾಹಿತಿ ಮೇರೆಗೆ ಕೂಡಲೇ ವಾಸೀಂ ಮತ್ತು ಮಜರ್ ನನ್ನು ಪೊಲೀಸರು ಬಂಧಿಸಿದರು, ನಂತರ ಗುರುವಾರ ಸಂಜೆ ಮತ್ತೊಬ್ಬ ಆರೋಪಿ ಇರ್ಫಾನ್ ನನ್ನು ಕೆ.ಜಿ ಹಳ್ಳಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.
ರುದ್ರೇಶ್ ಕೊಲೆಗೆ ಮಜರ್ ಜೊತೆ ನಡೆದಿದ್ದ ಕೆಲ ಸಣ್ಣ ಪುಟ್ಟ ಘಟನೆಗಳೇ ಕಾರಣವಾಗಿವೆ ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ರುದ್ರೇಶ್ ಮನೆಯ ಪಕ್ಕ ಮಜರ್ ತನ್ನ ಮ್ಯಾಕನಿಕ್ ಶಾಪ್ ಇಟ್ಟು ಕೊಂಡಿದ್ದ, ಈ ವಿಷಯವಾಗಿ ಇಬ್ಬರಿಗೂ ಗಲಾಟೆ ನಡೆದಿತ್ತು. ಕೆಲ ವರ್ಷಗಳ ಹಿಂದೆ ರುದ್ರೇಶ್ ಮಜರ್ ಮೇಲೆ
ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಮಜರ್ ಹವಣಿಸಿದ್ದ. ಜೊತೆಗೆ ಗೋ ಕಳ್ಳಸಾಗಣೆ ಮಾಡುವವರನ್ನು ಹಿಡಿದು ರುದ್ರೇಶ್ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಇದೆಲ್ಲಾ ರುದ್ರೇಶ್ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬಂದಿದೆ.
ರುದ್ರೇಶ್ ರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು, ಬಲಭಾಗದಿಂದ ರುದ್ರೇಶ್ ಕುತ್ತಿಗೆಗೆ ಕತ್ತಿಯಿಂದ ಹೊಡೆದಿದ್ದಾರೆ. ಈ ರೀತಿ ಹತ್ಯೆ ಮಾಡುವುದು ವೃತ್ತಿಪರ ಕೆಲಸಗಾರರಿಂದ ಮಾತ್ರ ಸಾಧ್ಯ, ಹತ್ಯೆ ಮಾಡಲು ಆರೋಪಿಗಳು ತರಬೇತಿ ಪಡೆದಿದ್ದಾರೆ. ಇದರ ಹಿಂದೆ ಸಂಘಟನೆಯೊಂದರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ರುದ್ರೇಶ್ ಹತ್ಯೆಯ ಹಿಂದೆ ಮಾಸ್ಟರ್ ಮೈಂಡ್ ಒಬ್ಬನಿದ್ದು. ಶೀಘ್ರವೇ ವಿಚಾರಣೆ ನಡೆಸಿ ಆತ ಯಾರು ಏನು ಎಂಬುದನ್ನು ಬಹಿರಂಗ ಪಡಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement