ಬೆಂಗಳೂರು: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ವಿರುದ್ಧ ನವೆಂಬರ್ 2 ರಂದು ಪ್ರತಿಭಟನೆ ನಡೆಸಲು ರಾಜ್ಯ ಒಕ್ಕಲಿಗ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಎಂಆರ್ ವೆಂಕಟೇಶ್ ಹೇಳಿದ್ದಾರೆ.
ಅ.28 ರಂದು ಬೆಂಗಳೂರಿನ ಶ್ರೀಗಂಧದ ಕಾವಲ್ ನಲ್ಲಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಶಾಸಕ ಮುನಿರತ್ನ, ಆದಿಚುಂಚನಗಿರಿಯ ಶ್ರೀಗಳ ಸಮ್ಮುಖದಲ್ಲಿ ಲಘುವಾಗಿ ಮಾತನಾಡಿದ್ದರು, ಇದನ್ನು ವಿರೋಧಿಸಿ ಒಕ್ಕಲಿಗ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲಿ ಮಾತನಾಡಿದ್ದ ಶಾಸಕ ಮುನಿರತ್ನ, ರಾಜಕಾರಣಿಗಳು ಎಷ್ಟೇ ಪ್ರಾಮಾಣಿಕರಾಗಿದ್ದರೂ, ಅವರ ವಿರುದ್ಧ ತಪ್ಪನ್ನು ಹೊರಿಸಲಾಗುತ್ತಿದೆ. 70 ವರ್ಷಗಳ ಕಾಲ ರಾಜ್ಯದ ಬಹುತೇಕ ಪಕ್ಷಗಳ ನಾಯಕರು ಆಳ್ವಿಕೆ ನಡೆಸಿದ್ದಾರೆ. ಆದ್ದರಿಂದ ಈಗ ಸ್ವಾಮೀಜಿಯವರೇ ರಾಜ್ಯ ಆಳಲಿ ಎಂದು ಮುನಿರತ್ನ ಅಭಿಪ್ರಾಯಪಟ್ಟಿದ್ದರು. ಆದಿಚುಂಚನ ಗಿರಿ ಸ್ವಾಮೀಜಿಗಳ ಎದುರು ಮುನಿರತ್ನ ಹಗುರ ಹೇಳಿಕೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಒಕ್ಕಲಿಗ ಒಕ್ಕೂಟದ ಮುಖಂಡರು, ಹೇಳಿಕೆಯನ್ನು ವಿರೋಧಿಸಿ ನವೆಂಬರ್. 2 ರಂದು ರಾಜರಾಜೇಶ್ವರಿ ನಗರದ ಆರ್ಚ್ ಬಳಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
Advertisement