ಬೆಂಗಳೂರು; ಮಹದಾಯಿ ನದಿ ನೀರು ವಿವಾದವನ್ನು ಮಾತುಕತೆ ಹಾಗೂ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ಮಹಾದಾಯಿ ನ್ಯಾಯಮಂಡಳಿ ಮೂರು ರಾಜ್ಯದ ಮುಖ್ಯಮಂತ್ರಿಗಳಿಗೆ ಗುರುವಾರ ಸಲಹೆ ನೀಡಿದೆ.
ಮಹಾದಾಯಿ ವಿವಾದ ಕುರಿತಂತೆ ನಿನ್ನೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ. ಪಂಛಲ್ ಅವರು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಕುಳಿತು ಮಾತುಕತೆ ಮಾಡುವ ಮೂಲಕ ಸೌಹಾರ್ದಯುತವಾಗಿ ವಿವಾದವನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ನ್ಯಾಯಮಂಡಳಿಯ ಈ ಸಲಹೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದು, ಮಹದಾಯಿ ನ್ಯಾಯಮಂಡಳಿ ಸಲಹೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯುತ್ತೇನೆ. ಮಾತುಕತೆ ಹಾಗೂ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದುನ ನ್ಯಾಯಮಂಡಳಿ ಹೇಳಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ನ್ಯಾಯಮಂಡಳಿಯೇ ಈ ರೀತಿಯಾಗಿ ಆದೇಶ ನೀಡಿರುವುದರಿಂದ ಗೋವಾ ಹಾಗೂ ಮಹಾರಾಷ್ಟ್ರದಿಂದ ಧನಾತ್ಮಕ ಪ್ರತಿಕ್ರಿಯೆ ಬರಬಹುದೆಂದು ನಂಬಿದ್ದೇನೆ. ವಿವಾದ ಇತ್ಯರ್ಥದಲ್ಲಿ ಪ್ರಧಾನಮಂತ್ರಿ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕಿದೆ. ವಿವಾದ ಇತ್ಯರ್ಥಕ್ಕೆ ಕರ್ನಾಟಕ ಸಿದ್ಧವಿದ್ದು, ಮೋದಿಯವರು ಮಧ್ಯಸ್ಥಿಕೆ ವಹಿಸುವುದೇ ಆದರೆ, ನಾನು ದೆಹಲಿಗೆ ಹೋಗಲು ಸಿದ್ಧನಿದ್ದೇನೆಂದು ಹೇಳಿದ್ದಾರೆ.
Advertisement