ಕೋಲಾರ: ಕೋಲಾರ ತಾಲೂಕಿನ ಜಂಗಾನಹಳ್ಳಿಯಲ್ಲಿರುವ ಶಾಸಕ ವರ್ತೂರು ಪ್ರಕಾಶ್ ಅವರ ಫಾರ್ಮ್ ನಲ್ಲಿರುವ ಸುಮಾರು 998 ಹಸುಗಳ ಪೈಕಿ 49 ಹಸುಗಳು "ಬ್ರೂಸಿಲ್ಲೋಸಿಸ್" ಎಂಬ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ಅವುಗಳ ದಯಾಮರಣಕ್ಕೆ ಪಶುಸಂಗೋಪನಾ ಸಚಿವ ಎ.ಮಂಜು ಅವರು ಆದೇಶಿದ್ದಾರೆ. ಅಲ್ಲದೆ ಹಾಲು ಮಾರಾಟಕ್ಕೂ ನಿಷೇಧ ಹೇರಲಾಗಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎ.ಮಂಜು ಅವರು, ವರ್ತೂರ್ ಪ್ರಕಾಶ್ ಅವರ ಫಾರ್ಮ್ ನ 49 ಹಸುಗಳಿಗೆ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಹಸುಗಳಿಗೆ ದಯಾಮರಣ ನೀಡಲು ನಿರ್ಧರಿಸಲಾಗಿದೆ ಎಂದರು,
ಈ ಬ್ಯಾಕ್ಟೀರಿಯಾ ಹಸುವಿನಿಂದ ಮನುಷ್ಯರಿಗೂ ಹರಡುತ್ತದೆ. ಹಾಗಾಗಿ ಫಾರ್ಮ್ ಹೌಸ್ ನಲ್ಲಿರುವ ಇತರೆ ಹಸುಗಳ ಹಾಲು ಮಾರಾಟ ಸಹ ನಿಷೇಧಿಸಲಾಗಿದೆ. ಅಲ್ಲದೇ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಸುಗಳಿಗೆ ದಯಾಮರಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇನ್ನು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಚೆನ್ನಕೇಶವ ಅವರ ನೇತೃತ್ವದ ಅಧಿಕಾರಿಗಳ ತಂಡ ಶಾಸಕರ ಫಾರ್ಮ್ ಗೆ ಭೇಟಿ ನೀಡಿದ್ದು, ಸೋಂಕು ತಗುಲಿರುವ ಹಸುಗಳ ರಕ್ತ ಮಾದರೆ ಪಡೆದು, ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.
ವರ್ತೂರ್ ಪ್ರಕಾಶ್ ಅವರ ತೋಟದಲ್ಲಿರುವ ಎಲ್ಲಾ ಹಸುಗಳಿಗೂ "ಬ್ರೂಸಿಲ್ಲೋಸಿಸ್" ವೈರಸ್ ಸೋಂಕು ತಗುಲಿದೆ ಎಂದು 2015ರ ಅಕ್ಟೋಬರ್ಲ್ಲಿ ನಡೆಸಿದ ಮಾದರಿಯಲ್ಲಿ ದೃಢಪಟ್ಟಿದೆ. ಶಾಸಕರು ಬೆಗ್ಲಿ ಹಾಲು ಉತ್ಪಾದಕರ ಸೊಸೈಟಿಯಿಂದ ಪ್ರತಿ ದಿನ 3 ಸಾವಿರ ಲೀಟರ್ ಹಾಲನ್ನು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿರುವುದರಿಂದ ಜನರಿಗೂ ಸೋಂಕು ಹರಡುವ ಭೀತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಶನಿವಾರ ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು.