ಬೆಂಗಳೂರು: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನೈಸ್ ರಸ್ತೆಯ ಸೋಮಪುರ ಬಳಿ ಗುರುವಾರ ಬೆಳಿಗ್ಗೆ 6.30 ರ ವೇಳೆಗೆ ಸಂಭವಿಸಿದೆ.
ಬನಶಂಕರಿ ಸಮೀಪದ ಪ್ರಗತಿನಗರದ ನಿವಾಸಿಗಳಾದ ರಾಮಚಂದ್ರ (75), ಅವರ ಮಗಳು ಭಾಗೀರಥಿ (35) ಹಾಗೂ ಮಗ ಶಿವಕುಮಾರ್ (28) ಮೃತ ದುರ್ದೈವಿಗಳು. ಇನ್ನೂ ಅಪಘಾತದಲ್ಲಿ ಭಾಗೀರಥಿ ಅವರ ಮಗ ಭರತ್ (12), ಮಗಳು ಬಿಂದುಶ್ರೀ (10) ಹಾಗೂ ತಾಯಿ ಬಸಮ್ಮ (65) ಗಾಯಗೊಂಡಿದ್ದಾರೆ.
ಬುಧವಾರ ಬಸಮ್ಮ ಅವರ ತಂದೆಯ ವರ್ಷದ ಕಾರ್ಯವಿತ್ತು. ಹೀಗಾಗಿ, ಕುಟುಂಬ ಸದಸ್ಯರೆಲ್ಲ ಎರಡು ದಿನಗಳ ಹಿಂದೆ ತಮ್ಮ ‘ಮಾರುತಿ 800’ ಕಾರಿನಲ್ಲಿ ಕಲಬುರ್ಗಿಯ ಸಾಲಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಕಾರ್ಯ ಮುಗಿಸಿಕೊಂಡು ಬುಧವಾರ ಸಂಜೆ ಅಲ್ಲಿಂದ ಬೆಂಗಳೂರಿಗೆ ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶಿವಕುಮಾರ್ ಮತ್ತು ಭಾಗಿರಥಿ ಸ್ಥಳದಲ್ಲೇ ಮೃತಪಟ್ಟರೇ. ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಚಂದ್ರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಲಘಟ್ಟಪುರ ಪೊಲೀಸರು ತಿಳಿಸಿದ್ದಾರೆ. ರಾತ್ರಿಯಿಡೀ ಶಿವಕುಮಾರ್ ಒಬ್ಬರೇ ವಾಹನ ಚಾಲನೆ ಮಾಡಿದ್ದರಿಂದ, ಅವರಿಗೆ ನಿದ್ದೆಯ ಮಂಪರು ಆವರಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Advertisement