ಗೋಕರ್ಣ ದೇವಾಲಯವನ್ನು ಮತ್ತೆ ಸರ್ಕಾರದ ವಶಕ್ಕೆ ನೀಡಲು ಶ್ರೀಗಳ ವಿರೋಧ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರ ಮರಳಿ ತನ್ನ ವಶಕ್ಕೆ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಹೊಸನಗರ ...
ಗೋಕರ್ಣ
ಗೋಕರ್ಣ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರ ಮರಳಿ ತನ್ನ ವಶಕ್ಕೆ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಹೊಸನಗರ ರಾಮಚಂದ್ರಾಪುರ ಮಠದ  ರಾಘವೇಶ್ವರ ಭಾರತೀ ಸ್ವಾಮೀಜಿ ವಿರೋಧ ವ್ಯಕ್ತ ಪಡಿಸಿದ್ದಾರೆ.

ಗಿರಿನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇವಾಲಯದ ಅಭಿವೃದ್ಧಿಯ ಹಿತದೃಷ್ಟಿಯಿಂದ  ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಹಿಂಪಡೆಯುವ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.

ಹೈಕೋರ್ಟ್‌ನಲ್ಲಿ ಈ ಸಂಬಂಧ ವ್ಯಾಜ್ಯದ ವಿಚಾರಣೆ ನಡೆಯುವಾಗ ಅಡ್ವೊಕೇಟ್‌ ಜನರಲ್‌  ಅವರು, ದೇವಸ್ಥಾನವನ್ನು ಮಠಕ್ಕೆ ವಹಿಸಿಕೊಟ್ಟ ತೀರ್ಮಾನದ ಕುರಿತಂತೆ ಪುನರ್‌ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.  ವಾಸ್ತವದಲ್ಲಿ ದೇವಸ್ಥಾನವನ್ನು ಸ್ವಾಧೀನಕ್ಕೆ ವಹಿಸಿಕೊಡಿ ಎಂದು ನಾವು ಯಾವತ್ತೂ ಸರ್ಕಾರವನ್ನು ಕೇಳಿಕೊಂಡಿರಲಿಲ್ಲ. ಬದಲಾಗಿ ಎಂಟು ವರ್ಷಗಳ ಹಿಂದೆ ಸರ್ಕಾರವೇ  ದೇವಾಲಯ ಮಠದ್ದು ಎಂದು ನ್ಯಾಯಾಲಯದಲ್ಲಿ ಅಫಿಡೆವಿಟ್‌ ಸಲ್ಲಿಸಿತ್ತು ಎಂದರು.

2008ರಲ್ಲಿ ದೇವಸ್ಥಾನ ಉಸ್ತುವಾರಿಯನ್ನು ಮಠ ವಹಿಸಿಕೊಂಡಾಗ ಅನೇಕ ಸಮಸ್ಯೆಗಳಿದ್ದವು. ಸ್ವಚ್ಛತೆ ಕಡೆಗಣಿಸಲಾಗಿತ್ತು. ಕಾಣಿಕೆಯಾಗಿ ಬರುತ್ತಿದ್ದ ಹಣಕ್ಕೆ ಲೆಕ್ಕ ಇಡುವ ವ್ಯವಸ್ಥೆ ಇರಲಿಲ್ಲ. ಇದಕ್ಕೆ ಮಠದ ಆಡಳಿತ ಮಂಡಳಿ ಕಡಿವಾಣ ಹಾಕಿತ್ತು. ಪ್ರತಿಯೊಂದಕ್ಕೂ ರಸೀದಿ ವ್ಯವಸ್ಥೆ ಮಾಡಲಾಯಿತು.ಭಕ್ತರಿಗೆ ಅನ್ನದಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಯೋಜನೆ ಜಾರಿಗೆ ತರಲಾಯಿತು. ಇದನ್ನು ಸಹಿಸದ ಕೆಲವರು, ಮಠದ ಹಿಡಿತದಿಂದ ದೇವಸ್ಥಾನ ಬೇರ್ಪಡಿಸಲು ಯತ್ನಿಸುತ್ತಿದ್ದಾರೆ. ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com