ಬೆಂಗಳೂರು: ಕೆರೆ ಒತ್ತುವರಿ ತೆರವು ಮಾಡುತ್ತಿದ್ದ ವೇಳೆ ಸರ್ಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಉದ್ಯಮಿ ಹಾಗೂ ನಟಿ ಹೇಮಶ್ರೀ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಬಾಬು ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ನಗರದ ಮಲ್ಲೇಶ್ ಪಾಳ್ಯದ ಗ್ಲೋಬಲ್ ಸ್ಕೂಲ್ ಬಳಿ ಕೆರೆ ಒತ್ತುವರಿ ಮಾಡಿ, ಕಟ್ಟಿದ್ದ ಮನೆಗಳನ್ನು ತೆರವು ಮಾಡಲಾಗುತ್ತಿತ್ತು. ಈ ವೇಳೆ ಉದ್ಯಮಿ ಸುರೇಶ್ ಬಾಬು ಕೆ.ಆರ್ ಪುರಂ ತಹಶಿಲ್ದಾರ್ ತೇಜಸ್ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದರು. ಒತ್ತುವರಿ ತೆರವು ಮಾಡದಂತೆ ಸುರೇಂದ್ರ ಬಾಬು ಸರ್ಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿ ಪಡಿಸಿದರು ಎನ್ನಲಾಗಿದೆ. ಅಲ್ಲದೆ ಸುರೇಂದ್ರ ಬಾಬು 30 ಗುಂಟೆ ಕೆರೆ ಒತ್ತುವರಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸುರೇಂದ್ರ ಬಾಬು ವಿರುದ್ಧ ತಹಶಿಲ್ದಾರ್ ತೇಜಸ್ ಕುಮಾರ್ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದೂರನ್ನು ಆಧರಿಸಿ ಬೈಯಪ್ಪನಹಳ್ಳಿ ಪೊಲೀಸರು ಸುರೇಂದ್ರ ಬಾಬು ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಸುರೇಂದ್ರ ಬಾಬು ಅವರು 2012 ಅಕ್ಟೋಬರ್ 19 ರಂದು ನಡೆದ ಅವರ ಪತ್ನಿ ಹೇಮಶ್ರೀ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.