ರಾಜ್ಯದ 6 ಜಿಲ್ಲೆಗಳಲ್ಲಿ ಹೊಸ ಸೈಬರ್ ಕ್ರೈಂ ಠಾಣೆಗಳು ಶೀಘ್ರದಲ್ಲೆ: ಆರ್.ಕೆ. ದತ್ತಾ

ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ರಾಜ್ಯದ ಆರು ನಗರಗಳಲ್ಲಿ ಹೊಸದಾಗಿ ಸೈಬರ್‌ ಕ್ರೈಂ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ರಾಜ್ಯದ ಆರು ನಗರಗಳಲ್ಲಿ ಹೊಸದಾಗಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳ ಆರಂಭಕ್ಕೆ ಆದೇಶ ಹೊರಡಿಸಿದೆ.

ಹೊಸದಾಗಿ 41 ಠಾಣೆಗಳನ್ನು ಸ್ಥಾಪಿಸಲು ಅನುಮತಿ ನೀಡಿದ್ದು, ಇದರಲ್ಲಿ ಕಲಬುರಗಿ  ಮಂಗಳೂರು, ದಾವಣಗೆರೆ, ಮೈಸೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಹೊಸ ಸೈಬರ್‌ ಕ್ರೈಂ ಠಾಣೆಗಳು ಆರಂಭವಾಗಲಿವೆ.

ಆರಂಭದಲ್ಲಿ ಈ ಹೊಸ ಠಾಣೆಗಳಿಗೆ ಸಿಐಡಿ ವಿಭಾಗದಿಂದಲೇ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಿದ್ದು, ಹಂತ ಹಂತವಾಗಿ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡುವ ಮೂಲಕ ಎರಡು ವರ್ಷಗಳೊಳಗೆ ಅವುಗಳನ್ನು ಸ್ವತಂತ್ರ ನಿರ್ವಹಣಾ ಠಾಣೆಗಳನ್ನಾಗಿಸಲು ತೀರ್ಮಾನಿಸಲಾಗಿದೆ.

ಇ-ಮೇಲ್‌, ಎಸ್‌ಎಂಎಸ್‌ಗಳ ಮೂಲಕ ವಂಚನೆ, ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ಮೊಬೈಲ್‌ಗ‌ಳ ಬಳಕೆ ಸೇರಿದಂತೆ ಪಾತಕಿಗಳು ಅಪರಾಧ ಕೃತ್ಯಗಳಿಗೆ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಆನ್ ಲೈನ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಈ ಠಾಣೆಗಳಲ್ಲಿ ಡಿವೈಎಸ್ಪಿ, ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗ‌ಳು ಸೇರಿ 4-5 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು,  ಹೊಸ ಠಾಣೆಗಳಲ್ಲಿ ಕೆಲಸ ಮಾಡಲಿಚ್ಚಿಸುವರಿಗೆ ಅವಕಾಶ ಕಲ್ಪಿಸುವುದಾಗಿ ಪ್ರಸುತ್ತ ಸಿಐಡಿ ವಿಭಾಗದಲ್ಲಿರುವವರಿಗೆ ತಿಳಿಸಲಾಗಿದೆ ಎಂದು ಅವರು  ಪೋಲೀಸ್ ಮಹಾ ನಿರ್ದೇಶಕ ರೂಪ್ ಕುಮಾರ್ ದತ್ತಾ ಹೇಳಿದ್ದಾರೆ.

ಹೊಸ ಠಾಣೆಗೆ ವರ್ಗಾವಣೆಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಐಡಿಯ ಸೈಬರ್‌ ಕ್ರೈಂ ಬ್ರಾಂಚ್‌ನ ಪರಿಣಿತರು ತರಬೇತಿ ನೀಡಲಿದ್ದಾರೆ. ಕೆಲ ದಿನಗಳಲ್ಲಿ ಈ ನೂತನ ಠಾಣೆಗಳು ಕಾರ್ಯಾರಂಭಿಸಲಿವೆ. ಈಗಾಗಲೇ ಆಯಾ ವಲಯದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಠಾಣೆಗಳಿಗೆ ಸ್ಥಳಾವಕಾಶ ಗುರುತಿಸಲಾಗಿದ್ದು, ಸಿಐಡಿಯಿಂದ ಉಪಕರಣಗಳ ಖರೀದಿ ಕೂಡ ಆಗಿದೆ ಎಂದು ಅವರು ತಿಳಿಸಿದ್ದಾರೆ,


ಇಲಾಖೆಯಲ್ಲಿ ಈಗಾಗಲೇ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಅಬಕಾರಿ ಮತ್ತು ಲಾಟರಿ ವಿಶೇಷ ದಳದ ಸಿಬ್ಬಂದಿ ನಿಯೋಜಿಸಲು ತೀರ್ಮಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com