ದಾವಣಗೆರೆ: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಎಸ್.ಎಂ. ಕರಿಬಸಪ್ಪ ಎಂಬುವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿ ಆದಾಯಕ್ಕೂ ಮೀರಿದ ಅಧಿಕ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ದಾವಣಗೆರೆಯ ಸರಸ್ವತಿ ಬಡಾವಣೆಯಲ್ಲಿರುವ ಕರಿಬಸಪ್ಪ ನಿವಾಸದಲ್ಲಿ ಎಸಿಬಿ ಅಧಿಕಾರಿಗಳಾದ ಕವಳಪ್ಪ ಹಾಗೂ ಇನ್ಸ್ಪೆಕ್ಟರ್ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿರುವ ತಂಡ ದಾಖಲೆಗಳ ಪರಿಶೀಲನೆ ನಡೆಸಿತು.
ಮೂಲತಃ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದವರಾದ ಕರಿಬಸಪ್ಪ ಅವರು ಡಿ ಗ್ರೂಪ್ ನೌಕರರಾಗಿ ಕೆಲಸಕ್ಕೆ ಸೇರಿದ ನಂತರ 2010ರಲ್ಲಿ ವಾಣಿಜ್ಯ ತೆರಿಗೆ ಇಲಾಖೆ ದ್ವಿತೀಯ ದರ್ಜೆ ನೌಕರರಾಗಿ ಬಡ್ತಿ ಪಡೆದಿದ್ದರು.
ಕರಿಬಸಪ್ಪ ತಮ್ಮ ಆದಾಯಕ್ಕೂ ಮೀರಿ ದಾವಣಗೆರೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಹೊಂದಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ಎಸಿಬಿ ಅಧಿಕಾರಿ ಕವಳಪ್ಪ ಮಾಹಿತಿ ನೀಡಿದರು.
ದಾಳಿ ವೇಳೆ ದಾವಣಗೆರೆಯ ನಗರದ ವಿವಿಧೆಡೆ ಸುಮಾರು 7 ಮನೆ ಹಾಗೂ 5ಕ್ಕೂ ಹೆಚ್ಚು ಸೈಟ್ಗಳಿರುವುದು ಪತ್ತೆಯಾಗಿದೆ. ಇದಲ್ಲದೆ 10 ಲಕ್ಷ ಬೆಲೆಬಾಳುವ ಹುಂಡೈ ಕಾರು, 2 ಬೈಕ್ಗಳು ಹಾಗೂ 8 ಎಕರೆ ಕಷಿ ಭೂಮಿ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.