ಸರ್ಕಾರಿ ಶಾಲೆಗಳ ದತ್ತು ಕಾರ್ಯಕ್ರಮ ಜಾರಿಗೆ ತರಲು ಮಕ್ಕಳ ಹಕ್ಕು ಆಯೋಗ ಚಿಂತನೆ

ದೆಹಲಿ ಸರ್ಕಾರದ ಕ್ರಮಗಳನ್ನು ಅನುಸರಿಸಿಕೊಂಡು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ದೆಹಲಿ ಸರ್ಕಾರದ ಕ್ರಮಗಳನ್ನು ಅನುಸರಿಸಿಕೊಂಡು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಿದೆ. ಇದಕ್ಕಾಗಿ ಶಾಲೆಯ ದತ್ತು ಕಾರ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ತರಗತಿ ಕೊಠಡಿಗಳ ನಿರ್ಮಾಣ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ವಾಚನಾಲಯ ಇತ್ಯಾದಿಗಳಿಗೆ ಹಣ ದಾನ ಮಾಡಬಹುದು.
ಇತ್ತೀಚೆಗೆ ತಂಡದ ಸದಸ್ಯರು ದೆಹಲಿಗೆ ತೆರಳಿ ಅಲ್ಲಿನ ಸರ್ಕಾರಿ ಶಾಲೆಗಳ ಪರಿಸ್ಥಿತಿ ಮತ್ತು ಅಲ್ಲಿನ ದಾನಿಗಳಿಂದ ಯಾವ ರೀತಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿದುಕೊಂಡು ಬಂದಿದ್ದರು. ಈ ವರದಿಯನ್ನು ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ಶಿಫಾರಸು ಮಾಡಿದ್ದಾರೆ.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಲಹೆಗಾರ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ಸುಧಾರಿಸಲು ಕೆಲವೊಂದು ಅಭಿಪ್ರಾಯಗಳನ್ನು ತಿಳಿಸಿದ್ದು ಬೆಂಗಳೂರಿಗೆ ಆಗಮಿಸಿ ತಂಡದ ಅಧಿಕಾರಿಗಳೊಂದಿಗೆ ಸದ್ಯದಲ್ಲಿಯೇ ಮಾತುಕತೆ ನಡೆಸಲಿದ್ದಾರೆ.
ತಂಡದ ಅಧ್ಯಕ್ಷೆ ಕೃಪಾ ಆಳ್ವ ಮಾತನಾಡಿ, ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ರಾತ್ರಿ ಮುಗಿಯುವುದರೊಳಗೆ ಬದಲಾಗಲಿಲ್ಲ. ಸಾರ್ವಜನಿಕರ ಸಹಕಾರದೊಂದಿಗೆ ಹಂತಹಂತವಾಗಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಸುಧಾರಿಸಲಾಯಿತು. ಅಲ್ಲಿ ಈಗಲೂ ಕೂಡ ಸರ್ಕಾರಿ ಶಾಲೆಗಳಲ್ಲಿ ಕೆಲವು ಬದಲಾವಣೆ ತರಲಾಗುತ್ತಿದೆ.
ತಾವು ದೆಹಲಿಯಲ್ಲಿ 12 ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಕಂಡು ಆಶ್ಚರ್ಯವಾಯಿತು. ಅವು ಸರ್ಕಾರಿ ಶಾಲೆಗಳೇ ಎಂಬ ಸಂಶಯ ಬಂತು ಎನ್ನುತ್ತಾರೆ.
ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೆಲವು ಸರ್ಕಾರಿ ಶಾಲೆಗಳಲ್ಲಿ 5,000 ವಿದ್ಯಾರ್ಥಿಗಳಿದ್ದು ಅವರು ಶೇಕಡಾ 90ರಿಂದ 95ರಷ್ಟು ಫಲಿತಾಂಶ ಗಳಿಸುತ್ತಾರೆ.
ದೆಹಲಿಯ ಕೊಳಚೆ ಪ್ರದೇಶದ ನಾಲ್ಕು ಮಹಡಿಯ ಶಾಲೆಯೊಂದರಲ್ಲಿ ಸರ್ಕಾರಿ ಶಾಲೆ ಖಾಸಗಿ ಶಾಲೆಯ ಮಾದರಿಯಲ್ಲಿ ಇದೆ. ಆರ್ಥಿಕವಾಗಿ ಮುಂದುವರಿದವರು ಕೂಡ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ದೆಹಲಿ ಸರ್ಕಾರ ಶಾಲೆಗಳಲ್ಲಿನ ಶಿಕ್ಷಕರಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ತರಬೇತಿ ಕೊಡಿಸುತ್ತಾರೆ.  ಇಂತಹ ಬದಲಾವಣೆ ನಮ್ಮ ರಾಜ್ಯದಲ್ಲಿ ಕೂಡ ಆಗಬೇಕು ಎನ್ನುತ್ತಾರೆ ಕೃಪಾ ಆಳ್ವ.
ಕೃಪಾ ಆಳ್ವ ಅವರು ಮುಂದಿನ ದಿನಗಳಲ್ಲಿ ಎಲ್ಲಾ 30 ಶೈಕ್ಷಣಿಕ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು ಸಾರ್ವಜನಿಕರೊಂದಿಗೆ ಸಭೆ ನಡೆಸಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಸುಧಾರಿಸುವಂತೆ ಕೋರಲಿದ್ದಾರೆ. ಶಾಲೆ ದತ್ತು ಕಾರ್ಯಕ್ರಮದ ಬಗ್ಗೆ ಕೂಡ ಅರಿವು ಮೂಡಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com