ಬೆಂಗಳೂರು: ದ್ರಾವಿಡ ಮುನ್ನೇತ್ರ ಕಜ್ಹಗಮ್ (ಡಿಎಂಕೆ) ನಾಯಕ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡು ರಾಜ್ಯದಲ್ಲಿ ಜಾಣತನದಿಂದ 'ಹಿಂದಿ-ವಿರೋಧಿ' ಆಟವನ್ನು ಆಡುತ್ತಿದ್ದಾರೆಂದು ಬಿಜೆಪಿ ಮಂಗಳವಾರ ಹೇಳಿದೆ.
ರಾಜ್ಯದ ಜನತೆ ಮೇಲೆ ಕೇಂದ್ರ ಸರ್ಕಾರ ಬಲವಂತದಿಂದ ಹಿಂದಿ ಭಾಷೆಯನ್ನು ಹೇರುತ್ತಿದೆ ಎಂದು ಈ ಹಿಂದೆ ಸ್ಟಾಲಿನ್ ಅವರು ಆರೋಪಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಎಸ್.ಪ್ರಕಾಶ್ ಅವರು, ತಮಿಳುನಾಡು ರಾಜಕೀಯಕ್ಕೆ ಮತ್ತೆ ಹಿಂದಿರುಗಲು ಸ್ಟಾಲಿನ್ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಈ ವಿಚಾರ ಸಂಬಂಧ ವಿವಾದ ಸೃಷ್ಟಿಸಿ, ತಮಿಳುನಾಡು ರಾಜ್ಯ ಜನತೆ ಆಕ್ರೋಶ ವ್ಯಕ್ತಪಡಿಸುವಂತೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಸ್ಟಾಲಿನ್ ಹಿಂದಿ-ವಿರೋಧಿ ಆಟವನ್ನು ಸ್ಟಾಲಿನ್ ಅತ್ಯಂತ ಜಾಣತನದಿಂದ ಆಡುತ್ತಿದ್ದಾರೆ. ಈ ಮೂಲಕ ಜನರ ವಿಶ್ವಾಸವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಸಂಸದೀಯ ಸಮಿತಿಯಲ್ಲಿ ನಡೆಸಲಾದ ಚರ್ಚೆಗೆ ಆಧಾರವಾಗಿ ಕೇಂದ್ರ ಸರ್ಕಾರ ಶಿಫಾರಸುಗಳನ್ನು ಮಾಡಿದೆ. 2011ರಲ್ಲೇ ಅಂದಿನ ಸರ್ಕಾರ ಸಮಿತಿಯನ್ನು ನೇಮಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗ ಸಮಿತಿಯನ್ನು ನೇಮಿಸಿರಲಿಲ್ಲ. ಸಮಿತಿಯ ಶಿಪಾರಸನ್ನು ಮೋದಿ ಸರ್ಕಾರದೊಂದಿಗೆ ಸಂಪರ್ಕಿಸಬಾರದು ಎಂದು ತಿಳಿಸಿದ್ದಾರೆ.
ಹಿಂದಿ ರಹಿತ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುವುದಿಲ್ಲಿ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಸ್ಪಷ್ಟನೆ ನೀಡಿದೆ. ಹಿಂದಿ ಭಾಷೆ ಬರದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರಬೇಕೆಂಬ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ. ತಮ್ಮ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿ ಅನಾವಶ್ಯಕವಾಗಿ ವಿವಾದವನ್ನು ಸೃಷ್ಟಿಸಲಾಗುತ್ತಿದೆ. ಮೋದಿ ಸರ್ಕಾರವನ್ನು ಅನಾವಶ್ಯಕವಾಗಿ ವಿವಾದಕ್ಕೆ ಎಳೆಯುತ್ತಿದ್ದಾರೆಂದು ಹೇಳಿದ್ದಾರೆ.