ಡಿಕೆ ಶಿವಕುಮಾರ್
ರಾಜ್ಯ
ಸಿದ್ದರಾಮಯ್ಯ, ಮೋದಿ ಸೇರಿ ಎಲ್ಲರಿಂದಲೂ ನನ್ನ ಮಗನ ವಿರುದ್ಧ ಪಿತೂರಿ: ಡಿಕೆಶಿ ತಾಯಿ ಆಕ್ರೋಶ
ಇಂಧನ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ನಡೆದ ಐಟಿ ದಾಳಿಯ ಬಗ್ಗೆ ಅವರ ತಾಯಿ ಗೌರಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ನನ್ನ ಮಗನನ್ನ ಟಾರ್ಗೆಟ್ ಮಾಡಿದ್ದಾರೆ..
ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ನಡೆದ ಐಟಿ ದಾಳಿಯ ಬಗ್ಗೆ ಅವರ ತಾಯಿ ಗೌರಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನನ್ನ ಮಗನನ್ನ ಟಾರ್ಗೆಟ್ ಮಾಡಿದ್ದಾರೆ.ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನನ್ನ ಮಗನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ದ್ವೇಷ ರಾಜಕಾರಣ, ನನ್ನ ಮಕ್ಕಳು ಜನಸೇವೆಯನ್ನು ಮಾಡುತ್ತಿದ್ದಾರೆ. ಅವರೂ ಯಾರಿಗೂ ಮೋಸ ಮಾಡಿಲ್ಲ. ನಮ್ಮ ಮನೆ ಮತ್ತು ಮಕ್ಕಳು ಮನೆ ಮೇಲೆ ದಾಳಿ ಮಾಡುವಂತಹದ್ದು ಏನೂ ಇರಲಿಲ್ಲ ಎಂದು ಹೇಳಿದ್ದಾರೆ
ನನ್ನ ಮಕ್ಕಳೂ ಎಂದೂ ತಪ್ಪು ಮಾಡಲ್ಲ, ಹಾಗಾಗಿ ನಾನು ಭಯಗೊಂಡಿಲ್ಲ ಎಂದು ಗೌರಮ್ಮ ಹೇಳಿದರು.
ಸಿಎಂ ಸಿದ್ದರಾಮಯ್ಯ ನನ್ನ ಮಗನಿಂದ ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ನಂಬಿಸಿ ಕತ್ತು ಕುಯ್ಯುತ್ತಿದ್ದಾರೆ. ನನ್ನ ಮಕ್ಕಳನ್ನು ಕಂಡ್ರೆ ಅವರಿಗೆ ಆಗಿ ಬರೋದಿಲ್ಲ. ಅಕ್ಕಿ ಕೊಟ್ಟೆ, ಅದು ಕೊಟ್ಟೆ ಎಲ್ಲಾ ಕೊಟ್ರೂ ಅದೇನು ಅವರ ಮನೆಯಿಂದ ಕೊಟ್ಟಿಲ್ಲ. ರೈತರು ಬೆಳೆದಿದ್ದ ಅಕ್ಕಿಯನ್ನು ಕೊಟ್ಟಿದ್ದಾರೆ. ನನ್ನ ಮಕ್ಕಳ ಮನೆ ಮೇಲೆ ದಾಳಿ ನಡೆದರೂ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ ನನ್ನ ಮಕ್ಕಳ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಸಿದ್ದರಾಮಯ್ಯ ಸೇರಿ ಯಾರೋಬ್ಬರು ನನ್ನ ಮಗನ ಬೆಂಬಲಕ್ಕೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮನೆಗೆ ಬಂದ ಅಧಿಕಾರಿಗಳು ಏತಕ್ಕಾಗಿ ತಾವು ಬಂದಿದ್ದೇವೆ ಎಂದು ಹೇಳಲಿಲ್ಲ. ನನ್ನ ಕೈಯ್ಯಲ್ಲಿ ಸಹಿ ಪಡೆದುಕೊಂಡರು. ನಂತರ ಮನೆಯನ್ನು ಶೋಧ ಮಾಡಿದರು. ನನಗೆ ಮೊದಲು ಅವರು ಯಾರು ಎಂಬುದು ಗೊತ್ತಾಗಲಿಲ್ಲ. ನನ್ನ ಮಕ್ಕಳ ಬಗ್ಗೆ ಅವರು ಪ್ರಶ್ನಿಸಿದರು. ನಾನು ಉತ್ತರಿಸಿದೆ.
ಕಾಂಗ್ರೆಸ್ ಪಕ್ಷಕ್ಕಾಗಿ ನಿಯತ್ತಿನಿಂದ ನನ್ನ ಮಗ ಕೆಲಸ ಮಾಡುತ್ತಿದ್ದಾನೆ. ಇದಕ್ಕಾಗಿ ಬಿಜೆಪಿ ಅವನನ್ನು ಗುರಿಯಾಗಿಸಿಕೊಂಡಿದೆ. ನನ್ನ ಮಗ ಕಷ್ಟ ಪಟ್ಟು ಹಣ, ಹೆಸರು, ಗೌರವ ಸಂಪಾದಿಸಿದ್ದಾನೆ. ಯಾವುದೇ ಶಕ್ತಿಗಳು ಆತನನ್ನು ತುಳಿಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ