ಇಂದಿರಾ ಕ್ಯಾಂಟೀನ್ ಯೋಜನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಚಾಲನೆ ನೀಡುತ್ತಿದ್ದು, ಬೆಂಗಳೂರಿನ ಎಲ್ಲ ಒಟ್ಟು 198 ವಾರ್ಡ್ ಗಳಲ್ಲಿ ವಾರ್ಡ್ ಗೆ ಒಂದರಂತೆ ಒಂದೊಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇದರ ಮೊದಲ ಭಾಗವಾಗಿ ಇಂದು 101 ಕ್ಯಾಂಟೀನ್ ಗಳಿಗೆ ಇಂದು ಚಾಲನೆ ನೀಡಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಯೋಜನೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ರಾಜ್ಯಕ್ಕಿಂದು ಐತಿಹಾಸಿಕ ದಿನವಾಗಲಿದೆ. ಹಸಿವು ಹಾಗೂ ಅಪೌಷ್ಟಿಕತೆಯ ವಿರುದ್ಧ ನಮ್ಮ ಹೋರಾಟದ ಪ್ರತೀಕವಾಗಿರುವ ಇಂದಿರಾ ಕ್ಯಾಂಟೀನ್ ಗೆ ಬೆಂಗಳೂರಿನಾದ್ಯಂತ ಚಾಲನೆ ದೊರೆಯಲಿದೆ ಎಂದು ಹೇಳಿದ್ದಾರೆ.
ಹಸಿವು ಮುಕ್ತಗೊಳಿಸಲು ಇಂದಿರಾ ಕ್ಯಾಂಟೀನ್ ಮಹತ್ವದ ಪಾತ್ರವಹಿಸಲಿದೆ. ವಿಶೇಷವಾಗಿ ನಗರದ ಕಾರ್ಮಿಕ ವರ್ಗದ ಜನರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.