ರಾಜ್ಯದಲ್ಲಿ ಮಳೆ ಕಣ್ಣಾ ಮುಚ್ಚಾಲೆ?

ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗಿದ್ದು ಹಲವಾರು ವರ್ಷಗಳಿಂದ ಆಗಸ್ಟ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
 ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗಿದ್ದು ಹಲವಾರು ವರ್ಷಗಳಿಂದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಲ್ಲಿ ಇಡೀ ನಗರ ತತ್ತರಿಸಿ ಹೋಗಿದೆ. ಆದರೂ ಕೆಲವು ಭಾಗಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಭಾರೀ ಮಳೆ ಬಿದ್ದರೂ ಕೂಡ ಆಗಸ್ಟ್ ಮೊದಲಾರ್ಧದಲ್ಲಿ ಈ ವರ್ಷ ಮಳೆಯ ಪ್ರಮಾಣ ಶೇಕಡಾ 38ರಷ್ಟು ಕೊರತೆಯಾಗಿದೆ.
ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಆಗಸ್ಟ್ 17ರವರೆಗೆ ನಿಗದಿತ ಪ್ರಮಾಣಕ್ಕಿಂತ ಅರ್ಧದಷ್ಟು ಮಳೆ ಕಡಿಮೆ ಸುರಿದಿದೆ. ಇದರಿಂದ ಕಾವೇರಿ ಮತ್ತು ತುಂಗಭದ್ರಾ ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿದೆ. ಇದರಿಂದ ಕಳೆದ ವರ್ಷದ ಈ ಸಮಯದಲ್ಲಿ ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ನೀರಿನ ಪ್ರಮಾಣಕ್ಕಿಂತ ಈ ವರ್ಷ ಕಡಿಮೆಯಾಗಿದೆ.
ಮುಂದಿನ ಕೆಲ ವಾರಗಳಲ್ಲಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದ್ದು ಇದರಿಂದ ಜಲಾಶಯದ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.
ಅಂಕಿಅಂಶ ಪ್ರಕಾರ, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಈ ತಿಂಗಳಲ್ಲಿ ಶೇಕಡಾ 50ರಷ್ಟು ಮಳೆಯ ಕೊರತೆಯುಂಟಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಮಳೆಯ ಕೊರತೆಯಾದರೂ ಕೂಡ ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೆಂಗಳೂರು ನಗರ ಮತ್ತು ಇತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿರುವುದರಿಂದ ಜನರು ಸ್ವಲ್ಪ ನಿರಾಳರಾಗಿದ್ದಾರೆ.
ಮಳೆ ಕೊರತೆ: ಇದುವರೆಗೆ ಈ ವರ್ಷ ರಾಜ್ಯದಲ್ಲಿ ಶೇಕಡಾ 27ರಷ್ಟು ಮಳೆಯ ಕೊರತೆಯುಂಟಾಗಿದ್ದು, ಮಲೆನಾಡಿನಲ್ಲಿ ಶೇಕಡಾ 31ರಷ್ಟು ಮಳೆಯ ಕೊರತೆ ಕಂಡುಬಂದಿದೆ. ಇದರಿಂದ ರೈತರ ಬೆಳೆ ಬೆಳೆಯುವಿಕೆ ಮೇಲೆ ಪರಿಣಾಮ ಬೀರಿದೆ.
ಮಾಲಿನ್ಯದ ಪರಿಣಾಮ:ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಮಂಡಲ ಮತ್ತು ಸಾಗರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಜಿ.ಎಸ್.ಭಟ್ ಹೇಳುವ ಪ್ರಕಾರ, ಮಳೆ ಕೊರತೆಗೆ ವಾಯು ಕಣಗಳಲ್ಲಿ ಮಾಲಿನ್ಯದ ಪ್ರಮಾಣ ಅಧಿಕವಾಗಿರುವುದು ಕಾರಣವಾಗಿದೆ. ಉಪ್ಪು, ಧೂಳು, ಮೋಡಗಳಲ್ಲಿನ ಮಳೆ ಹನಿಗಳ ರಚನೆಗೆ ಪರಾಗ ಮುಖ್ಯವಾದುದು. ವಾಯು ಕಣಗಳಲ್ಲಿ ಅನವಶ್ಯಕ ಪದಾರ್ಥಗಳು ಜಾಸ್ತಿ ಸೇರಿಕೊಂಡರೆ ಮಳೆ ಕೊರತೆಯುಂಟಾಗುತ್ತದೆ.
ಕೆಲವೊಮ್ಮೆ ಮೋಡ ಆಕಾಶದಲ್ಲಿ ದಟ್ಟವಾಗಿ ಕವಿದಿರುತ್ತದೆ. ಆದರೆ ಮಳೆ ಬರುವುದೇ ಇಲ್ಲ. ಇದು ವಾಯುಕಣಗಳಲ್ಲಿ ಅನಗತ್ಯ ಅಂಶಗಳ ಸೇರ್ಪಡೆಯಿಂದಾಗಿ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com