ಕಲಬುರಗಿ: ಕೋಹಿನೂರ ಗ್ರಾಮದಲ್ಲಿ ಎಳ್ಳ ಅಮಾವಾಸ್ಯೆ ನಿಮಿತ್ತ ವನ ಭೋಜನಕ್ಕೆಂದು ಹೊಲಕ್ಕೆ ತೆರಳಿದ್ದ ವೇಳೆ ಓರ್ವ ಬಾಲಕ, ಮೂವರು ಬಾಲಕಿಯರು ಸೇರಿ ನಾಲ್ವರು ನೀರುಪಾಲಾದ ದಾರುಣ ಘಟನೆ ನಡೆದಿದೆ.
ಕೋಹಿನೂರ ಗ್ರಾಮದ ತನಜ್ ಬಾನು ಲಾಲ್ ಮೊಹಮ್ಮದ್(15), ಇಸ್ರಾತ್ ಬಾನು ಇಸ್ಮಾಯಿಲ್ ಖುರೇಶಿ(15), ಜಿಯಾಬಾನು ಸತ್ತಾರ್(15) ಹಾಗೂ ಓರ್ವ ಬಾಲಕ ತಬ್ರೆಜ್ ನಾಜಿರ್ ಸಾಬ್(12) ಮೃತ ದುರ್ದೈವಿಗಳು.
ಕೆರೆಯಲ್ಲಿ ಮೀನುಗಳಿಗೆ ಆಹಾರ ಹಾಕಲು ಬಳಸುವ ತೆಪ್ಪದಲ್ಲಿ ಒಂಬತ್ತು ಮಂದಿ ತೆಪ್ಪ ಹತ್ತಿ ವಿಹಾರಕ್ಕೆಂದು ನೀರಿಗಿಳಿದಿದ್ದಾರೆ. ಆದರೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಕುಳಿತಿದ್ದರಿಂದ ತೆಪ್ಪ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ದುರಂತ ಸಂಭವಿಸಿದೆ. ಇದರಲ್ಲಿ ಐವರು ಈಜಿಕೊಂಡು ಬಂದು ದಡ ಸೇರಿದ್ದಾರೆ. ಆದರೆ ಈಜು ಬಾರದವರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ನಂತರ ಶೋಧ ಕಾರ್ಯ ನಡೆಸಿದ ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ. ಮಕ್ಕಳ ಮೃತದೇಹ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.