ಚಿಕ್ಕಮಂಗಳೂರು: ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಣ್ಣಾಮಲೈ ಅವರು ಮಧ್ಯರಾತ್ರಿ ಕೆಟ್ಟುನಿಂತ ಪ್ರವಾಸಿಗರ ವಾಹನ ರಿಪೇರಿಗೆ ಮುಂದಾಗಿ ಮತ್ತೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟ್ಟಿದ್ದ ಪ್ರವಾಸಿ ವಾಹನ ತಡರಾತ್ರಿ ಚಿಕ್ಕಮಗಳೂರು-ಶೃಂಗೇರಿ ರಸ್ತೆಯಲ್ಲಿ ಪಂಚರ್ ಆಗಿ ನಿಂತಿತ್ತು. ಈ ವೇಳೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಅದೇ ರಸ್ತೆಯಲ್ಲಿ ಆಗಮಿಸುತ್ತಿದ್ದ ಅಣ್ಣಾಮಲೈ ಪ್ರವಾಸಿಗರ ಸಮಸ್ಯೆ ಏನು ಎಂದು ಕೇಳಿ ತಾವೇ ಖುದ್ದಾಗಿ ಸ್ಪ್ಯಾನರ್ ಹಿಡಿದು ಟಯರ್ ಅನ್ನು ಬದಲಿಸಲು ಮುಂದಾಗಿದ್ದಾರೆ.
ಆದರೆ ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗದಿದ್ದಾಗ ಮೆಕ್ಯಾನಿಕ್ ಗೆ ಕರೆ ಮಾಡಿ ತಕ್ಷಣ ಬರುವಂತೆ ಸೂಚಿಸಿದ್ದಾರೆ. ಮೆಕ್ಯಾನಿಕ್ ಸ್ಥಳಕ್ಕೆ ಬಂದ ನಂತರ, ಗಾಡಿ ರಿಪೇರಿ ಮಾಡಿ ಚಿಕ್ಕಮಗಳೂರಿಗೆ ತೆಗೆದುಕೊಂಡು ಬನ್ನಿ ಎಂದು ಮೆಕ್ಯಾನಿಕಿಗೆ ಅಣ್ಣಾಮಲೈ ಸೂಚಿಸಿದ್ದಾರೆ.
ಇನ್ನು ಕಾರಿನಲ್ಲಿದ್ದ ಮಹಿಳೆಯರು ಸಹಿತ ಐವರನ್ನು ತಮ್ಮ ವಾಹನದಲ್ಲೇ ಕೂರಿಸಿಕೊಂಡು ಚಿಕ್ಕಮಗಳೂರಿಗೆ ಕರೆದುಕೊಂಡು ಬಂದು ಡ್ರಾಪ್ ಕೊಡಿಸಿದ್ದಾರೆ. ಎಸ್ಪಿಯವರೇ ಸಹಾಯ ಮಾಡಿದ್ದು ತುಂಬಾ ಖುಷಿಕೊಟ್ಟಿದೆ ಎಂದು ಪ್ರವಾಸಿಗರು ಆಶ್ಚರ್ಯ ಹಾಗೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.