ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ೩೫೧೫ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಏಪ್ರಿಲ್ ೨೦೧೩ ರಿಂದ ನವೆಂಬರ್ ೨೦೧೭ರ ವರೆಗೆ ರಾಜ್ಯದಲ್ಲಿ ಒಟ್ಟು ೩೫೧೫ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಪೈಕಿ ಬರ ಮತ್ತು ಬೆಳೆ ನಷ್ಟದಿಂದ ೨೫೨೫ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಏಪ್ರಿಲ್ ೨೦೦೮ ರಿಂದ ಏಪ್ರಿಲ್ ೨೦೧೨ ರ ವರೆಗೆ ೧೧೨೫ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಎಪ್ರಿಲ್ ೨೦೧೫ ರಿಂದ ೨೦೧೭ ಎಪ್ರಿಲ್ ವರೆಗೆ ೨೫೧೪ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಅದರಲ್ಲಿ ೧೯೨೯ ಪ್ರಕರಣಗಳನ್ನು ಕೃಷಿ ಇಲಾಖೆ ಒಪ್ಪಿಕೊಂಡಿದೆ.
ಎಪ್ರಿಲ್ ೨೦೧೭ರಿಂದ ನವೆಂಬರ್ ೨೦೧೭ ರವರೆಗೆ ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿತ್ತು. ಆದರೂ ೬೨೪ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಈ ೪೧೬ ರೈತರ ಆತ್ಮಹತ್ಯೆಯನ್ನು ಕೃಷಿ ಇಲಾಖೆ ಪರಿಗಣಿಸಿದೆ.
೧೧೨ ಆತ್ಮಹತ್ಯೆ ಪ್ರಕರಣಗಳು ಅನುಮೋದನೆಗಾಗಿ ರಾಜ್ಯ ಸರ್ಕಾರ ಸಮಿತಿಯ ಬಳಿ ಬಾಕಿ ಇದೆ. ಈ ವರ್ಷದ ನವೆಂಬರ್ವರೆಗೆ ೧೦೫ ಆತ್ಮಹತ್ಯೆ ಪ್ರಕರಣ ಸಮಿತಿಯ ಮುಂದೆ ಅನುಮೋದನೆಗೆ ಬಾಕಿ ಇದೆ. ಕಳೆದ ವರ್ಷದ ೭ ಪ್ರಕರಣಗಳಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.