ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರಗೊಂದಿಗೆ ಮಾತನಾಡಿದ ದೇಶಪಾಂಡೆ, ನೌಕಾನೆಲೆ ಯೋಜನೆ ಸಂಬಂಧ 4,032 ಕುಟುಂಬಗಳು ತಮ್ಮ ಆಸ್ತಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದಾರೆ. ತಮಗೆ ಹೆಚ್ಚುವರಿ ಪರಿಹಾರ ಒದಗಿಸಿಕೊಡುವಂತೆ ಸಂತ್ರಸ್ತರು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದು, ಅದಕ್ಕೆ ನ್ಯಾಯಾಲಯ ಪ್ರತಿ ಗುಂಟೆ ಜಮೀನಿಗೆ 11,500 ರೂಪಾಯಿ ನೀಡುವಂತೆ ಸರ್ಕಾರಕ್ಕೆ ಆದೇಶ ಮಾಡಿದೆ. 750 ಕೇಸುಗಳಿಗೆ ಮಾತ್ರ ರಕ್ಷಣಾ ಸಚಿವಾಲಯ ಪರಿಹಾರ ನೀಡಿದ್ದು, ಸೆಕ್ಷನ್ 18/1 ಮತ್ತು 28(ಎ)ಯಡಿ ಇನ್ನೂ 843 ಕೇಸುಗಳು ಇತ್ಯರ್ಥವಾಗದೆ ಉಳಿದುಕೊಂಡಿವೆ. ಇತ್ತೀಚೆಗೆ 25 ಪ್ರಕರಣಗಳಲ್ಲಿ 5.51 ಕೋಟಿ ರೂಪಾಯಿ ಸರ್ಕಾರ ಬಿಡುಗಡೆ ಮಾಡಿದೆ. ಈ ಎಲ್ಲಾ ವಿಷಯಗಳನ್ನು ಕೇಂದ್ರ ರಕ್ಷಣಾ ಸಚಿವೆಗೆ ವಿವರಿಸಿದ್ದು ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದರು.