ಬೆಂಗಳೂರು: ಮಗು ಒಂದೇ ಸಮನೆ ಅಳುತ್ತಿರುವುದನ್ನು ಸಹಿಸದ ತಾಯಿ ಎರಡು ವರ್ಷದ ಮಗನನ್ನು ಕೊಂದು ಹಾಕಿದ ಘಟನೆ ನಗರದಲ್ಲಿ ಇತ್ತೀಚೆಗೆ ನಡೆದಿದೆ. ತಾಯಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತ ಮಗು ವಿಜಯ್ ಎಂದಾಗಿದ್ದು ಈತ ಅರ್ಮುಗಂ ಎಂಬವರ ಮಗನಾಗಿದ್ದ. ಆರೋಪಿ ಮಹಿಳೆ ಕಸ್ತೂರಿ ಬಾಯಿ. ದಂಪತಿ ಎಂ.ಜಿ.ಗಾರ್ಡನ್ ನಲ್ಲಿ ವಾಸಿಸುತ್ತಿದ್ದರು. ಪತಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರೆ ಪತ್ನಿ ಮನೆಯ ಹತ್ತಿರ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಈ ಘಟನೆ ನಡೆದದ್ದು ಜನವರಿ 9ರಂದು. ಆದರೆ ಕಳೆದ ಶುಕ್ರವಾರ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆತಂದ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ.
ಜನವರಿ 9ರಂದು ಕಸ್ತೂರಿ ಬಾಯಿಯ ಎರಡನೇ ಮಗ ಮತ್ತು ಮೃತ ಮಗು ವಿಜಯ್ ಪ್ರಿಂಟಿಂಗ್ ಪ್ರೆಸ್ ಗೆ ಹೋಗಿದ್ದರು. ಸ್ವಲ್ಪ ಹೊತ್ತು ಕಳೆದ ನಂತರ ವಿಜಯ್ ನನ್ನು ಮನೆಗೆ ತಂದು ಬಿಟ್ಟನು. ಕಸ್ತೂರಿ ಪ್ರೆಸ್ ಗೆ ಹೋದಾಗ ಮಗ ಅಲ್ಲಿ ಇಲ್ಲದಿದ್ದುದರಿಂದ ಪುನಃ ಮನೆಗೆ ಹಿಂತಿರುಗಿದಳು. ಒಂದೇ ಸಮನೆ ಅಳುತ್ತಿದ್ದ ವಿಜಯ್ ನನ್ನು ಎಷ್ಟೇ ಸಮಾಧಾನ ಮಾಡಿದರೂ ಕೇಳಲಿಲ್ಲ. ಸಿಟ್ಟಿನಿಂದ ಕಸ್ತೂರಿ ಬಾಯಿ ಮಗುವಿನ ತಲೆಯನ್ನು ಗೋಡೆಗೆ ಬಡಿದಳು. ಅಲ್ಲದೆ ಕೋಲಿನಿಂದ ಬಡಿದು ಅಡುಗೆ ಮನೆಗೆ ಹೋಗಿದ್ದಳು.
ಕೂಡಲೇ ಮಗು ಪ್ರಜ್ಞೆ ತಪ್ಪಿ ಬಿದ್ದಿತ್ತು. ಇದನ್ನು ಗಮನಿಸಿದ ಕಸ್ತೂರಿಯ ಸೋದರ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಗು ಆಗಲೇ ತೀರಿಕೊಂಡಿತ್ತು. ಮಗುವಿನ ತಲೆಗೆ, ಹೃದಯ ಮತ್ತು ಶ್ವಾಸಕೋಶಕ್ಕೆ ವಿಪರೀತ ಏಟು ಬಿದ್ದಿದ್ದರಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.