ಬೆಂಗಳೂರು: ಯಶವಂತಪುರ-ಹೌರಾ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿಗೆ ಗುರುವಾರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಚಾಲನೆ ನೀಡಿದರು.
ಸದಾನಂದಗೌಡ ಅವರು ಇಂದು ಬೆಳಗ್ಗೆ 10 ಗಂಟೆಗೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ನೂತನ ರೈಲಿನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಂತರ ಮಾತನಾಡಿದ ಅವರು, ಬೆಂಗಳೂರು-ಕೊಯಮತ್ತೂರ್ ಇಂಟರ್ ಸಿಟಿ ರೈಲು ಸದ್ಯದಲ್ಲೇ ಆರಂಭವಾಗಲಿದೆ. ಬೆಂಗಳೂರು-ಭುವನೇಶ್ವರ್, ಬೆಂಗಳೂರು-ಗಂಗಾನಗರ ನೂತನ ರೈಲು ಬಿಡಲಾಗುತ್ತಿದೆ. ಈ ಎಲ್ಲಾ ರೈಲಿನ ವೇಳಾಪಟ್ಟಿ ಸಿದ್ಧವಾಗುತ್ತಿದೆ ಎಂದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಡಿವಿಎಸ್, ನಾಳೆ ರಾಜ್ಯದ ನಾಯಕರೊಂದಿಗೆ ಹೈಕಮಾಂಡ್ ಸಭೆ ಕರೆದಿದೆ. ವರಿಷ್ಠರು ಬಿಕ್ಕಟ್ಟು ಪರಿಹಾರ ಮಾಡಲಿದ್ದಾರೆ ಎಂದರು.