ಬೆಂಗಳೂರು: ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜಕ್ಕೂರಿನಲ್ಲಿ ನಡೆದಿದೆ.
ಮುರುಗನ್ (48) ಹಾಗೂ ವೆಂಕಟೇಶ್ (50) ಎಂಬುವರು ಮೃತಪಟ್ಟಿದ್ದಾರೆ. ಮುರುಗನ್ ಗಾರೆ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ಟೈಲರ್ ಆಗಿದ್ದರು. ಇಬ್ಬರೂ ಆರ್.ಟಿ.ನಗರ ಸಮೀಪದ ಚಾಮುಂಡೇಶ್ವರಿನಗರ ನಿವಾಸಿಗಳು
ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸರು ಕಾರು ಚಾಲಕ ಇರ್ಫಾನ್ ಅಲಿ ಹುಸೈನ್ (19) ಎಂಬಾತನನ್ನು ಬಂಧಿಸಿದ್ದಾರೆ. ಈತ ಹೆಬ್ಬಾಳದ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ.
ಜಕ್ಕೂರು ನಿವಾಸಿಯಾದ ಇರ್ಫಾನ್, ಬೆಳಿಗ್ಗೆ 10 .15 ರ ಸುಮಾರಿಗೆ ಕಾರು ಚಲಾಯಿಸಿಕೊಂಡು ಕಾಲೇಜಿನ ಕಡೆಗೆ ಹೋಗುತ್ತಿದ್ದ. ಇದೇ ವೇಳೆ ಮುರುಗನ್ ಹಾಗೂ ವೆಂಕಟೇಶ್ ಅವರು ಬೈಕ್ನಲ್ಲಿ ಜಕ್ಕೂರಿಗೆ ತೆರಳುತ್ತಿದ್ದರು. ವೇಗವಾಗಿ ಬಂದ ಕಾರು, ಹಿಂದಿನಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಇಬ್ಬರ ಮೇಲೂ ಕಾರಿನ ಚಕ್ರಗಳು ಹರಿದು ಹೋಗಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಂತರ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಲು ಯತ್ನಿಸಿದ ಇರ್ಫಾನ್ನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು. ಬೈಕ್ ಸವಾರರಿಬ್ಬರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
Advertisement