ಬೆಂಗಳೂರು: ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಲು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸದ್ಯಕ್ಕೆ ಬಿಎಸ್ ವೈ ವಿರುದ್ಧ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.
ಗಂಗೇನಹಳ್ಳಿ ವ್ಯಾಪ್ತಿಯ ಮಠದಹಳ್ಳಿ ಲೇಔಟ್ನಲ್ಲಿ 1 ಎಕರೆ 11 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ (ಡಿನೋಟಿಫಿಕೇಶನ್) ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತಕ್ಷಣಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಬಾರದು’ ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಅರ್ಜಿದಾರರ ಹಿರಿಯ ವಕೀಲ ಸಿ.ವಿ.ನಾಗೇಶ್, ಎರಡು ವರ್ಷಕ್ಕೂ ಹಿಂದೆ ದಾಖಲಾದ ಎಫ್ಐಆರ್ ತನಿಖೆಯನ್ನು ಪೊಲೀಸರು ಈಗ ಚುರುಕುಗೊಳಿಸಿದ್ದಾರೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ಅರ್ಜಿದಾರರು ಮುಖ್ಯಮಂತ್ರಿ ಅಭ್ಯರ್ಥಿ. ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ನೀವು ತನಿಖೆ ಚುರುಕುಗೊಳಿಸಿದ್ದೀರಿ. ಚುನಾವಣೆ ಮುಗಿದ ಮೇಲೆ ಅವರನ್ನು ನಿರ್ದೋಷಿ ಎಂದರೆ ಏನು ಪ್ರಯೋಜನ. ಅವರ ರಾಜಕೀಯ ಜೀವನಕ್ಕೆ ನಷ್ಟ ಉಂಟಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.
ಇದನ್ನು ಅಲ್ಲಗಳೆದ ಲೋಕಾಯುಕ್ತ ವಕೀಲ ವೆಂಕಟೇಶ ಅರಬಟ್ಟಿ, ಸ್ವಾಮಿ ತನಿಖೆ ಆಗಿನಿಂದಲೂ ಪ್ರಗತಿಯಲ್ಲಿದೆ ಎಂಬ ಸಮಜಾಯಿಷಿ ನೀಡಿ ಲಿಖಿತ ಆಕ್ಷೇಪಣೆ ಸಲ್ಲಿಸಿದರು.