ಕರ್ನಾಟಕ: ರಾಜ್ಯದ 25ಕ್ಕೂ ಹೆಚ್ಚು ನಗರಗಳಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ

ರಾಜ್ಯದ 25 ಜಿಲ್ಲೆಗಳ 25ಕ್ಕೂ ಹೆಚ್ಚು ನಗರಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಹೊರ ವರ್ತುಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ 25 ಜಿಲ್ಲೆಗಳ 25ಕ್ಕೂ ಹೆಚ್ಚು ನಗರಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಹೊರ ವರ್ತುಲ ರಸ್ತೆ(ಔಟರ್ ರಿಂಗ್ ರೋಡ್) ನಿರ್ಮಿಸಲಾಗುತ್ತಿದೆ.
ರಾಜ್ಯ ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಈಗಾಗಲೇ ಆರಂಭಿಕ ಕೆಲಸಗಳನ್ನು ಆರಂಭಿಸಿದೆ. ವರದಿ ಪ್ರಕಾರ, ಕೊಡಗು ಹೊರತುಪಡಿಸಿ ಬೇರೆಲ್ಲಾ ಜಿಲ್ಲೆಗಳಿಗೆ ಹೊರ ವರ್ತುಲ ರಸ್ತೆಯ ಅವಶ್ಯಕತೆಯಿದೆ. ಅಧಿಕಾರಿಗಳ ಪ್ರಕಾರ, ನಗರ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಈ ಅಭಿಯಾನ ಸಹಾಯವಾಗಲಿದೆ. 
ಮೂರು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ವಿವರ ನೀಡಿದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿ.ಪೊನ್ನುರಾಜ್, ಹೊರ ವರ್ತುಲ ರಸ್ತೆ ನಿರ್ಮಿಸುವುದರ ಮುಖ್ಯ ಉದ್ದೇಶ ನಗರದೊಳಗೆ ಮಾಲಿನ್ಯವನ್ನು ನಿಯಂತ್ರಿಸುವುದು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು. ಇದಕ್ಕಾಗಿ ಭೂಮಿಯನ್ನು ಪಡೆಯುವ ಕಾರ್ಯ ಇಲಾಖೆ ಮಾಡಲಿದ್ದು ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ಯೋಜನೆ ಪ್ರಕಾರ, ಹೊರ ವರ್ತುಲ ರಸ್ತೆ ನಗರಗಳ ಹೊರಗೆ 8ರಿಂದ 12 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ಸದ್ಯದಲ್ಲಿಯೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಧನ ಸಹಾಯಕ್ಕೆ ಮನವಿ ಸಲ್ಲಿಸಲಾಗುವುದು. ಆದರೆ ಯೋಜನೆಯ ಅಂದಾಜು ವೆಚ್ಚವನ್ನು ತಿಳಿಸಲು ಪೊನ್ನುರಾಜು ತಿರಸ್ಕರಿಸಿದರು.
ಮೈಸೂರಿನಂತಹ ನಗರಗಳಿಗೆ ಹೊರ ವರ್ತುಲ ರಸ್ತೆಯ ಅವಶ್ಯಕತೆಯಿದೆ. ಮಂಡ್ಯ, ರಾಮನಗರಗಳಿಂದ ಮೈಸೂರಿಗೆ ಪ್ರಯಾಣಿಸುವವರು ಮಧ್ಯ ಸಂಚಾರ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೊರ ವರ್ತುಲ ರಸ್ತೆ ನಿರ್ಮಾಣವಾದರೆ ಸಂಚಾರ ದಟ್ಟಣೆ ಕಡಿಮೆಯಾಗುವುದಲ್ಲದೆ ಬೇಗನೆ ಮೈಸೂರಿಗೆ ತಲುಪಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರದ ಬಗ್ಗೆ ಮಾತನಾಡಿದ ಅವರು, ಹೊರ ವರ್ತುಲ ರಸ್ತೆ ನಿರ್ಮಾಣದಿಂದ ನಗರ ಪ್ರದೇಶದ ಒಳಗೆ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಅಲ್ಲದೆ ಪ್ರಯಾಣದ ಅವಧಿ ಕೂಡ ಕಡಿಮೆಯಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com