ಬೆಂಗಳೂರು: ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಕನಕಪುರದ ತೊಪ್ಪಗಾನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಕನಕಪುರ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು ಕಾರು ಕನಕಪುರದಿಂದ ಬೆಂಗಳೂರಿನ ಕಡೆ ಸಂಚರಿಸುತ್ತಿದ್ದು ಎನ್ನಲಾಗಿದೆ.
ವಿದ್ಯಾರಣ್ಯಪುರ ನಿವಾಸಿ ಚಂದ್ರು ಮತ್ತು ಚಾಲಕ ಆಂದ್ರಪ್ರದೇಶದ ರಾಜು ಎಂಬ ಇಬ್ಬರ ಶವಗಳನ್ನು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ಉಳಿದ ಮೂವರ ಗುರುತು ಪತ್ತೆಯಾಗಿಲ್ಲ.
ಸಂಜೆ ಸುಮಾರು 7.30 ರ ವೇಳೆಗೆ ಕಾರು ಬೆಂಗಳೂರು ಕಡೆಗೆ ಸಂಚರಿಸುತ್ತಿತ್ತು, ಎದುರಿನಿಂದ ಕ್ಯಾಂಟರ್ ಕಾರಿಗೆ ಬಂದು ಅಪ್ಪಳಿಸಿದೆ, ಅಪ್ಪಳಿಸಿದ ರಭಸಕ್ಕೆ ಕಾರು ಕ್ಯಾಂಟರ್ ಕೆಳಗೆ ಸಿಲುಕಿದೆ, ನಂತರ ಅರ್ಥ್ ಮೂವರ್ ನಿಂದ ವಾಹನಗಳ ಭಾಗಗಳನ್ನು ಬಿಡಿ ಬಿಡಿಯಾಗಿಸಿ ನಂತರ ಶವಗಳನ್ನು ಹೊರ ತೆಗೆಯಲಾಗಿದೆ.
ಶವಗಳನ್ನು ಹೊರತೆಗೆಯಲು 1 ಗಂಟೆಗೂ ಅಧಿಕ ಸಮಯ ಬೇಕಾಯಿತು. ಮೊಬೈಲ್ ಏನು ಇಲ್ಲದ ಕಾರಣ ಉಳಿದ ಮೂವರು ಶವಗಳ ಗುರುತು ಪತ್ತೆ ಹಚ್ಚುವುದು ತುಂಬಾ ಕಷ್ಟದ ಕೆಲಸವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶವಗಳನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.