ಆನೆಯೊಂದಿಗೆ ಈ ಹಿಂದೆ ಫೋಟೋ ತೆಗೆದುಕೊಂಡಿದ್ದ ಅಭಿಲಾಷ್
ಆನೆಯೊಂದಿಗೆ ಈ ಹಿಂದೆ ಫೋಟೋ ತೆಗೆದುಕೊಂಡಿದ್ದ ಅಭಿಲಾಷ್

ಬನ್ನೇರುಘಟ್ಟ: ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಯುವಕ ಬಲಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆನೆ ತಿವಿದು 28 ವರ್ಷದ ಯುವಕ ಮೃತಪಟ್ಟ....
Published on
ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆನೆ ತಿವಿದು 28 ವರ್ಷದ ಯುವಕ ಮೃತಪಟ್ಟ ಘಟನೆ ಮೊನ್ನೆ ಮಂಗಳವಾರ ನಡೆದಿದೆ. ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ಬಿಎಂಟಿಸಿ ಕಂಡೆಕ್ಟರ್ ವೊಬ್ಬರ ಪುತ್ರ ಅಭಿಲಾಷ್ ವಿ ಮೃತ ದುರ್ದೈವಿ. ಉದ್ಯಾನವನದಲ್ಲಿ ಅಭಿಲಾಷ್ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಸುಂದರ್ ಎಂಬ ಆನೆ ಉದ್ರೇಕಗೊಂಡಿದೆ. ಅಭಿಲಾಷ್ ತನ್ನ ಮೂವರು ಸ್ನೇಹಿತರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ. 
 ಮಂಗಳವಾರ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಗೆ ರಜೆ ಇದ್ದು, ಸೂಕ್ತ ಭದ್ರತೆ ಇಲ್ಲದ ಕಾರಣ ಬೆಂಗಳೂರಿನ ಗಿರಿನಗರ ನಿವಾಸಿ ಅಭಿಲಾಷ್ ನಿನ್ನೆ ಸಂಜೆ ಸ್ನೇಹಿತರ ಜೊತೆ ಬನ್ನೇರುಘಟ್ಟಕ್ಕೆ ಹಕ್ಕಿಪಿಕ್ಕಿ ಕಾಲೋನಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಸಫಾರಿಯೊಳಕ್ಕೆ ಪ್ರವೇಶಿಸಿದ್ದರು.
ಅಭಿಲಾಷ್ ಗೆ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭ್ಯಾಸವಿದೆ. ಈ ಹಿಂದೆ ಮದಗಜಗಳಾದ ರೌಡಿ ರಂಗ ಮತ್ತು ಐರಾವತನನ್ನು ಪಳಗಿಸಲು ಕ್ರಾಲ್ ನಲ್ಲಿ ಇಟ್ಟಿದ್ದಾಗಲೂ ಬಂದು ಸೆಲ್ಫಿ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಈ ಬಾರಿ ರಜೆಯ ದಿನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದು ಸಫಾರಿಯಲ್ಲಿದ್ದ ಸುಂದರ ಎಂಬ ಆನೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲಾಗದೇ ಅಭಿಲಾಷ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. 
ಘಟನೆ ವಿಷಯ ತಿಳಿದ ಪಾರ್ಕ್ ನ ಅಧಿಕಾರಿಗಳು ಸೀಗೆಕಟ್ಟೆ ಪೊಲೀಸರಿಗೆ ವಿಷಯ ತಿಳಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ಬಂದ ಅಭಿಲಾಷ್ ನ ಸಂಬಂಧಿಕರು ಹಕ್ಕಿಪಿಕ್ಕಿ ಕಾಲೋನಿ ಬಳಿಯಿದ್ದ ಅಭಿಲಾಷ್ ನ ದ್ವಿಚಕ್ರ ವಾಹನ ಗುರುತಿಸಿದರು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com