ವಿಜಯಪುರ: ದಲಿತ ಯುವಕನೊಂದಿಗೆ ವಿವಾಹ; ಗರ್ಭಿಣಿ ಮಗಳನ್ನೇ ಸುಟ್ಟು ಕೊಂದ ಕುಟುಂಬಸ್ಧರು

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ತುಂಬು ಗರ್ಭಿಣಿಯೋರ್ವಳನ್ನು ಆಕೆಯ ಪೋಷಕರೇ ಸಜೀವವಾಗಿ ದಹಿಸಿರುವ ಘಟನೆಯೊಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಜಯಪುರ: ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ತುಂಬು ಗರ್ಭಿಣಿಯೋರ್ವಳನ್ನು ಆಕೆಯ ಪೋಷಕರೇ ಸಜೀವವಾಗಿ ದಹಿಸಿರುವ ಘಟನೆಯೊಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ನಡೆದಿದೆ. 
ಬಾನು ಬೇಗಂ (21) ಹತ್ಯೆಯಾದ ಯುವತಿಯಾಗಿದ್ದಾಳೆ. ವರ್ಷಗಳ ಹಿಂದಷ್ಟೇ ಸಯಬಣ್ಣ ಶರಣಪ್ಪ ಕೊನ್ನೂರು (24) ಎಂಬ ದಲಿತ ಯುವಕನನ್ನು ಪ್ರೀತಿಸಿದ್ದಳು. ಇದಕ್ಕೆ ಬಾನು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಪೋಸ್ಕೋ ಕಾಯ್ದೆಯಡಿಯಲ್ಲಿ ಶರಣಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಮನೆಯಿಂದ ಓಡಿಹೋದ ಬಾನು ಹಾಗೂ ಶರಣಪ್ಪ ಗೋವಾಗೆ ತೆರಳಿ ವಿವಾಹವಾಗಿದ್ದರು. 
ಗರ್ಭಿಣಿಯಾಗಿದ್ದ ಬಾನು ಈಗಲಾದರೂ ತಮ್ಮ ಕುಟುಂಬಸ್ಥರು ತಮ್ಮನ್ನು ಒಪ್ಪಿಕೊಳ್ಳಬಹುದು ಎಂಬ ಭರವಸೆಯೊಂದಿಗೆ ಮತ್ತೆ ಊರಿಗೆ ಬಂದಿದ್ದಳು. ಆದರೆ, ಆಕೆಯ ಪೋಷಕರು ಮನಃಸ್ಥಿತಿ ಮಾತ್ರ ಬದಲಾವಣೆಯಾಗಿರಲಿಲ್ಲ. ಬಾನು ಮತ್ತು ಶರಣಪ್ಪ ಮನೆ ಬಳಿ ಬರುತ್ತಿದ್ದಂತೆಯೇ ಬಾನು ಪೋಷಕರು ಜಗಳಕ್ಕೆ ಆರಂಭಿಸಿದ್ದಾರೆ. ಅಲ್ಲದೆ, ಶರಣಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶರಣಪ್ಪ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾನೆ. 
ನಂತರ ಕೈಗೆ ಸಿಕ್ಕ ಬಾನುವಿಗೆ ತುಂಬು ಗರ್ಭಿಣಿ ಎಂಬುದನ್ನೂ ನೋಡದೆ ಥಳಿಸಿದ್ದಾರೆ. ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಸಜೀವವಾಗಿ ದಹಿಸಿ ಹತ್ಯೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಬಾನು ತಾಯಿ, ಸಹೋದರಿ, ಸಹೋದರ ಸೇರಿದಂತೆ ಒಟ್ಟು ನಾಲ್ವರನ್ನು ಬಂಧನಕ್ಕೊಳಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com