ಬೆಂಗಳೂರು: ಮುಂದಿನ ಎರಡು ದಿನಗಳಲ್ಲಿ ರಾಜ್ಯಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಲಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಡಿಕೆಗಿಂತ 2 ದಿನ ಮೊದಲೇ ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಆದರೆ, ಮುಂಗಾರು ದುರ್ಬಲಗೊಂಡಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಬುಧವಾರ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಐಎಂಡಿ ನಿರ್ದೇಶಕ ಸುಂದರ್ ಮಹದೇವ್ ಹೇಳಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಇಡೀ ರಾಜ್ಯ ಮುಂಗಾರು ಮಳೆಗೆ ಸಾಕ್ಷಿಯಾಗಲಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ಸುಮಾರು 13 ಸೆಂಮೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ತುಂತುರು ಮಳೆಯಾಗಿದೆ.
ಈ ವೇಳೆ ಸರಿಯಾದ ವೇಳೆಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ, ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗಲಿದೆ. ಇದು ಪೋಸ್ಟ್ ಆಲ್ಪಿನೋ ಪರಿಣಾಮ ಎಂದು ವಾತಾವರಣ ಬದಲಾವಣೆ ತಜ್ಞ ರಾಮ್ ಕುಮಾರ್ ತಿಳಿಸಿದ್ದಾರೆ.