ಬೆಂಗಳೂರು: ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರ ನೀಡಿದ್ದ 100 ಕೋಟಿ ರು ಅನುದಾನವನ್ನು ಮೈಸೂರು ವಿಶ್ವ ವಿದ್ಯಾನಿಲಯ ಬೇರೆ ಕೆಲಸಕ್ಕೆ ಉಪಯೋಗಿಸಿಕೊಂಡಿರುವುದು ತಿಳಿದು ಬಂದಿದೆ.
ಮೈಸೂರು ವಿವಿ ಶತಮಾನೋತ್ಸವದ ಕಾರ್ಯಕ್ರಮಗಳಿಗಾಗಿ 9.5 ಕೋಟಿ ರು ಹಣ ಬಿಡುಗಡೆಗೆ ಸಿಂಡಿಕೇಟ್ ಅನುಮೋದನೆ ನೀಡಿತ್ತು. ವಿವಿ ಖಾತೆಗೆ 50 ಕೋಟಿ ರುಹಣ ವರ್ಗಾವಣೆ ಮಾಡಲಾಗಿತ್ತು ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಸಿಂಡಿಕೇಟ್ ಸಭೆಯಲ್ಲಿ ಇದರ ಬಗ್ಗೆ ನಾವು ಆಕ್ಷೇಪ ವ್ಯಕ್ತ ಪಡಿಸಿದಾಗ ಹೆಚ್ಚಿನ ಸದಸ್ಯರು ಇದಕ್ಕೆ ಬೆಂಬಲ ನೀಡಲಿಲ್ಲ, ಹೀಗಾಗಿ ಅಜೆಂಡಾ ಅನುಮೋದನೆಗೊಂಡಿತು ಎಂದು ಸಿಂಡಿಕೇಟ್ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸಿಂಡಿಕೇಟ್ ಸಭೆಯಲ್ಲಿ ಪಡೆದ ಒಪ್ಪಿಗೆ ಮೇರೆಗೆ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಗೆ ಕಾರ್ಯಕ್ರಮಕ್ಕಾಗಿ 9,15,45,862 ರು ಹಣವನ್ನು ಸ್ಥಳೀಯ ಕಾರ್ಯದರ್ಶಿ ಹೆಸರಿಗೆ ಉಪ ಕುಲಪತಿ ಗಳು ನೀಡಿದ್ದಾರೆ. 1916-2016ರ ಮೈಸೂರು ವಿವಿ ಶತಮಾನೋತ್ಸವ ಸಂಭ್ರಮಾಚರಣೆ ನಿಧಿ ಅನುದಾನದಿಂದ ಈ ಹಣವನ್ನು ನೀಡಲಾಗಿದೆ.
ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ನೀಡಿರುವ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಸಂಬಂಧ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಇಲಾಖೆ ದೂರು ನೀಡಲಾಗಿದೆ.
103ನೇ ಭಾರತೀಯವಿಜ್ಞಾನ ಕಾಂಗ್ರೆಸ್ ಸಮಾವೇಶ ಶತಮಾನೋತ್ಸವ ಸಮಾರಂಭದ ಒಂದು ಭಾಗವಾಗಿದೆ ಎಂದು ಸ್ಥಳೀಯ ಕಾರ್ಯದರ್ಶಿ ಪ್ರೊ, ಬಿ.ಎನ್ ರಾಮಚಂದ್ರ ಹೇಳಿದ್ದಾರೆ.
ಸಮಾವೇಶಕ್ಕೆ 18 ಕೋಟಿ ರು ಹಣ ಖರ್ಚಾಗಿದೆ ಅದರಲ್ಲಿ 14 ಕೋಟಿ ಹಣವನ್ನುಮೈಸೂರು ವಿವಿ ನೀಡಿದ್ದು, ಉಳಿದ 4 ಕೋಟಿ ಹಣವನ್ನು ವಿವಿಧ ಎಜೆನ್ಸಿಗಳಿಂದ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.