ರಾಜ್ಯ
ಮಂಗಳೂರು, ಕಲ್ಲಡ್ಕ ಉದ್ವಿಗ್ನ; ಎಸ್ ಡಿಪಿಐ ಕಾರ್ಯಕರ್ತನ ಹಂತಕರ ಪತ್ತೆಗೆ ನಾಲ್ಕು ಪೊಲೀಸ್ ತಂಡ
ಇಲ್ಲಿನ ಬೆಂಜನಪದವು ಎಂಬಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ)ಯ...
ಮಂಗಳೂರು: ಇಲ್ಲಿನ ಬೆಂಜನಪದವು ಎಂಬಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ)ಯ ಕಾರ್ಯಕರ್ತನ ಹತ್ಯೆಯಾದ ಬಳಿಕ ಮಂಗಳೂರು ಮತ್ತು ಕಲ್ಲಡ್ಕ ಸುತ್ತಮುತ್ತ ಉದ್ವಿಗ್ನ ಸ್ಥಿತಿ ಉಂಟಾಗಿದೆ.
ಬೆಂಜನಪದವಿಗೆ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕ ಅಶ್ರಫ್ ಕಲಯಿ(35 ವ)ಯನ್ನು ಬಂಟ್ವಾಳ ತಾಲ್ಲೂಕಿನ ಕರಾವಳಿ ಕಾಲೇಜು ಸಮೀಪ ಮೊನ್ನೆ ಬುಧವಾರ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಟೋವನ್ನು ಅಡ್ಡಗಟ್ಟಿ ನಿಲ್ಲಿಸಿ ಹತ್ಯೆಗೈದು ಪರಾರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಕಲ್ಲಡ್ಕ, ಬಂಟ್ವಾಳ ಸುತ್ತಮುತ್ತ ಉದ್ವಿಗ್ನ ವಾತಾವರಣ ಉಂಟಾಗಿದ್ದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸರಿಗೆ ಕಲಯಿಯನ್ನು ಹತ್ಯೆ ಮಾಡಿದವರ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ.
ಹಂತಕರನ್ನು ಹಿಡಿಯಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ.
ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಮಂಗಳೂರಿನಲ್ಲಿ ಸೆಕ್ಷನ್ 144ನ್ನು ಹೇರಲಾಗಿದ್ದು, ಜಿಲ್ಲೆಯಾದ್ಯಂತ ಎಲ್ಲಿ ಕೂಡ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ.
ಈ ಕೊಲೆ ನಡೆದ ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿಬಿ ವೇದಮೂರ್ತಿ ಅವರನ್ನು ಕಡ್ಡಾಯ ರಜೆ ಮೇಲೆ ಏಕೆ ಕಳುಹಿಸಲಾಗಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅಲೋಕ್ ಮೋಹನ್, ಪರಿಣಾಮಕಾರಿ ಕಾನೂನನ್ನು ಕಾಪಾಡುವುದು ಮುಖ್ಯ ಉದ್ದೇಶವಾಗಿದೆ ಎಂದರು.