ಕಡಿಮೆ ಹಾಜರಾತಿ: ರಾಜ್ಯದ 4 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನಿಷೇಧ
ಬೆಂಗಳೂರು: ಪದೇ ಪದೇ ತರಗತಿಗೆ ಚಕ್ಕರ್ ಹಾಕುವ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಕೆ ಶಾಕ್ ನೀಡಿದೆ. ಕಡಿಮೆ ಹಾಜರಾತಿಯ ಕಾರಣ ಮಾರ್ಚ್ 9 ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 4,204 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿಷೇಧ ಹೇರಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಕಾಲೇಜಿಗೆ ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಡಿಮೆ ಹಾಜರಾತಿಯ ಕಾರಣ ಮಾರ್ಚ್/ ಏಪ್ರಿಲ್ 2016 ರ ಪರೀಕ್ಷೆಗೆ 1,000 ವಿದ್ಯಾರ್ಥಿಗಳು ಹಾಜರಾಗಲು ಅನರ್ಹರಾಗಿದ್ದರು. 2015 ರಲ್ಲಿ 2,050 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಿಂದ ಹೊರಗುಳಿದ್ದಿದರು.
2006ರ ಕರ್ನಾಟಕ ಶಿಕ್ಷಣ ಕಾಯಿದೆಯ 21 ನೇ ನಿಯಮದ ಪ್ರಕಾರ ವಿದ್ಯಾರ್ಥಿ ಅಂತಿಮ ಪರೀಕ್ಷೆಗೆ ಕೂರಲು ಶೇ.75 ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಇದೇ ನಿಯಮ ಪ್ರಥಮ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ.
ಹಾಜರಾತಿ ಕಡಿಮೆ ಇದ್ದರೂ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪ್ರವೇಶ ಪತ್ರ ನೀಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಟಿಕೆಟ್ ನೀಡುವುದನ್ನು ಇಲಾಖೆ ಸ್ಥಗಿತಗೊಳಿಸಿತು. 2013 ಮುಂಚೆ ಕಡಿಮೆ ಹಾಜರಾತಿ ಇದ್ದರೂ ಪರೀಕ್ಷೆಗೆ ಬರೆಯಬಹುದಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ