ಟೀಕೆ, ಬೆದರಿಕೆಗೆ ಸೊಪ್ಪು ಹಾಕದ ಸುಹಾನಾ ಪೋಷಕರು: ಮಗಳ ಬೆಂಬಲಕ್ಕೆ ನಿಂತ ಕುಟುಂಬಸ್ಥರು
ಶಿವಮೊಗ್ಗ: ಖಾಸಗಿ ಚಾನೆಲ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಿಂದೂ ಭಕ್ತಿ ಗೀತೆ ಹಾಡಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ಗಾಯಕಿ ಸುಹಾನಾ ಸೈಯ್ಯದ್ ಬೆಂಬಲಕ್ಕೆ ಆಕೆಯ ಪೋಷಕರು ಮುಂದಾಗಿದ್ದಾರೆ.
ಆಕೆಯ ಹಾಡುವ ಅಭಿರುಚಿಗೆ ನಾವು ಬೆಂಬಲ ನೀಡುತ್ತೇವೆ, ಯಾವುದೇ ಟೀಕೆಗಳಿಗೂ ಸೊಪ್ಪು ಹಾಕುವುದಿಲ್ಲ ಎಂದು ಶಿಕ್ಷಕರೂ ಆಗಿರುವ ಸುಹಾನಾ ತಂದೆ
ಸೈಯ್ಯದ್ ಮುನೀರ್ ಹೇಳಿದ್ದಾರೆ.
ಯಾವುದೇ ಟೀಕೆಗಳಿಗೆ ನಾವು ಮಣೆ ಹಾಕುವುದಿಲ್ಲ, ಮುಂದಿನ ದಿನಗಳಲ್ಲಿ ಆಕೆಯ ಹಾಡಿನ ಪ್ರದರ್ಶನ ನೀಡುತ್ತಾಳೆ, ನಾವು ಅವಳಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಆಕೆಯ ಹಾಡಿನ ಅಭ್ಯಾಸದ ಕಡೆ ಗಮನ ನೀಡುತ್ತೇವೆ ಎಂದು ಸೈಯ್ಯದ್ ಮುನೀರ್ ಹೇಳಿದ್ದಾರೆ.
ಕನ್ನಡ ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ಸಂಗೀತ ಕಾರ್ಯಕ್ರಮದಲ್ಲಿ ಸುಹಾನಾ ಹಿಂದೂ ಭಕ್ತಿಗೀತೆ ಹಾಡಿದ್ದಳು. ಇದಾದ ನಂತರ ಆಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅನ್ಯ ಸಮುದಾಯದವರು ಹಿಂದೂ ಭಕ್ತಿ ಗೀತೆಗಳನ್ನು ಹಾಡಬಾರದು ಎಂದು ವಿರೋಧಿಸಲಾಗಿತ್ತು. ಆದರೆ ಸಚಿವ ಯುಟಿ ಖಾದರ್ ಸೇರಿದಂತೆ ಸುಹಾನಾಗೆ ಹಲವರು ಬೆಂಬಲ ಸೂಚಿಸಿದ್ದರು.
ಸುಹಾನಾ ಶಿವಮೊಗ್ಗ ಸಾಗರ ತಾಲೂಕಿನ ಭೀಮನ ಕುಂಟೆಯ ಶಿಕ್ಷಕ ದಂಪತಿಯ ಪುತ್ರಿ. ಸಾಗರದಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದಳು, ನಂತರ ಸಾಗರದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಂಗಿಸ ಸದ್ಯ ಬೆಂಗಳೂರಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಶಾಲಾ ದಿನಗಳಿಂದಲೇ ಸುಹಾನಾ ಗಾಯನ ಸ್ಪರ್ದೆಗಳಲ್ಲಿ ಭಾಗವಹಿಸುತ್ತಿದ್ದಳು. ಈ ಮಟ್ಟಕ್ಕೆ ತಲುಪಲು ಆಕೆ ತುಂಬಾ ಶ್ರಮ ವಹಿಸಿದ್ದಾಳೆ.
ಪ್ರತಿಭೆಯನ್ನು ನೀರೆರೆದು ಪ್ರೋತ್ಸಾಹಿಸದೇ ಧರ್ಮದ ಹೆಸರಿನಲ್ಲಿ ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿವಾದಾತ್ಮಕ ವಿಷಯಗಳನ್ನು ಚರ್ಚೆ ಮಾಡುತ್ತಿರುವುದು ಖಂಡನೀಯ.