ನಿಯಮ ಉಲ್ಲಂಘಿಸಿ ಮನೆ ನಿರ್ಮಿಸುತ್ತಿದ್ದವರ ವಿರುದ್ಧ ದೂರು: ತಾಯಿ ಮಗನ ಮೇಲೆ ಹಲ್ಲೆ

ನಿಯಮ ಉಲ್ಲಂಘಿಸಿ ಮನೆ ಕಟ್ಟಿಸುತ್ತಿದ್ದ ಬಗ್ಗೆ ಬಿಬಿಎಂಪಿಗೆ ದೂರು ನೀಡಿದರೆಂಬ ಕಾರಣಕ್ಕೆ ತಾಯಿ–ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬೆಂಗಳೂರು: ನಿಯಮ ಉಲ್ಲಂಘಿಸಿ ಮನೆ ಕಟ್ಟಿಸುತ್ತಿದ್ದ ಬಗ್ಗೆ ಬಿಬಿಎಂಪಿಗೆ ದೂರು ನೀಡಿದರೆಂಬ ಕಾರಣಕ್ಕೆ ತಾಯಿ–ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.


ಕೆ.ಆರ್.ಪುರ ಸಮೀಪದ ಟಿ.ಸಿ.ಪಾಳ್ಯ ನಿವಾಸಿ ಜಾನ್ (32), ದೇವಸ್ಯ (45) ಹಾಗೂ ಬಾಬು (29) ಬಂಧಿತ ಆರೋಪಿಗಳು.

ಆರೋಪಿಗಳು ಶನಿವಾರ ಬೆಳಿಗ್ಗೆ ರಾಜು ಹಾಗೂ ಅವರ ತಾಯಿ ಲಕ್ಷ್ಮಿಬಾಯಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅದರನ್ವಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಖಾಸಗಿ ಕಂಪೆನಿ ಉದ್ಯೋಗಿಯಾದ ರಾಜು, ತಾಯಿ ಜತೆ ಟಿ.ಸಿ.ಪಾಳ್ಯದಲ್ಲಿ ನೆಲೆಸಿದ್ದಾರೆ. ಇವರ ಮನೆ ಪಕ್ಕದಲ್ಲೇ ಕೇರಳದ ದೇವಸ್ಯ ಮನೆ ಕಟ್ಟಿಸುತ್ತಿದ್ದಾರೆ. ‘ಬಿಬಿಎಂಪಿ ನಿಯಮದಂತೆ ನಾವು ಮೂರು ಅಡಿ ಜಾಗ ಬಿಟ್ಟು ಮನೆ ಕಟ್ಟಿಸಿದ್ದೇವೆ. ನೀವೂ ಆ ನಿಯಮ ಪಾಲಿಸಿ’ ಎಂದು ರಾಜು ಕೆಲ ದಿನಗಳ ಹಿಂದೆ ದೇವಸ್ಯ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ.

ಆದರೆ, ದೇವಸ್ಯ ಅವರು ಸೆಟ್ ಬ್ಯಾಕ್ ಬಿಡದೆ ಮನೆ ನಿರ್ಮಾಣ ಕೆಲಸ ಆರಂಭಿಸಿದ್ದರು. ಹೀಗಾಗಿ, ರಾಜು ಪಾಲಿಕೆ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ಇದರಿಂದ ಕೆರಳಿದ ದೇವಸ್ಯ, ಶನಿವಾರ  ಸಹಚರರ ಜತೆ ಮನೆ ಹತ್ತಿರ ಹೋಗಿ ದಾಂದಲೆ ಮಾಡಿದ್ದರು. ಘಟನೆಯಿಂದ ರಾಜು ಅವರ ಕಾಲು ಮುರಿದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಗಳ ನಡೆಯುತ್ತಿದ್ದಾಗ ಶಾಸಕರ ಆಪ್ತರೊಬ್ಬರು ಮನೆ ಹತ್ತಿರ ಬಂದು ಸಂಧಾನ ಮಾಡಲೆತ್ನಿಸಿದರು. ಅಲ್ಲದೇ, ಅವರೆಲ್ಲ ಸರಿ ಇಲ್ಲ. ತಂಟೆಗೆ ಹೋಗಬೇಡಿ. ಜಗಳವನ್ನು ಇಲ್ಲಿಗೆ ಬಿಟ್ಟು ಸುಮ್ಮನಿದ್ದುಬಿಡಿ ಎಂದು ಅವರ ಪರವಾಗಿಯೇ ಮಾತನಾಡಿದ್ದರು ಎಂದು  ರಾಜು ಆರೋಪಿಸಿದ್ದರು.  ಆದರೆ ಪ್ರಕರಣಕ್ಕೂ ಶಾಸಕರಿಗೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾಜು ಮೇಲೆ ನಡೆದ ಹಲ್ಲೆ ವಿಡಿಯೋವನ್ನು ಅವರ ಮಗಳು ಸೆರೆ ಹಿಡಿದಿದ್ದಾರೆ. ಟಿವಿ ಚಾನೆಲ್ ಗಳಲ್ಲೂ ವಿಡಿಯೋ ಸಿಕ್ಕಿದ್ದು, ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com